ಈದ್ ಹಿನ್ನೆಲೆ: ಸಾಮರಸ್ಯದ ವಿಡಿಯೋ ನಿರ್ಮಿಸಿದ ಹಿಂದೂ ಯುವಕನ ಮೇಲೆ ಬಿಜೆಪಿ ಮುಖಂಡರಿಂದ ಹಲ್ಲೆ; ಆರೋಪ
ಕೊಲ್ಕತ್ತಾ/ ಅಗರ್ತಲಾ: ಉದಯಪುರದ ಬಪನ್ ನಂದಿ (23) ಎಂಬ ಯುವಕ, ಈದ್ ಸಂಭ್ರಮದ ವಿಡಿಯೊದಲ್ಲಿ ನಟಿಸಿದ ಕಾರಣಕ್ಕಾಗಿ ಬಿಜೆಪಿ ಮುಖಂಡರು ಆತನ ಮೇಲೆ ದಾಳಿ ನಡೆಸಿದ್ದಾರೆನ್ನಲಾದ ಘಟನೆ ನಡೆದಿದೆ ಎಂದು newsclick.in ವರದಿ ಮಾಡಿದೆ.
ಖುಪ್ಲಿಂಗ್ ಪ್ರದೇಶದ ನಿವಾಸಿಯಾದ ಬಪನ್ ನಂದಿ ವ್ಲೋಗಿಂಗ್ನಲ್ಲಿ (ವಿಡಿಯೊ ಬ್ಲಾಗಿಂಗ್) ಪರಿಣತಿ ಹೊಂದಿದ್ದ ಹಾಗೂ ವಿಡಿಯೊ ತುಣುಕುಗಳನ್ನು ನಿರ್ಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರ ವ್ಲಾಗ್ಗಳು ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದವು.
ಶನಿವಾರ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಪಂಚಾಯ್ತಿ ಉಪ ಪ್ರಧಾನ ಅನು ಮೂರಾ ಸಿಂಗ್ ಹಾಗೂ ಇತರ ಬಿಜೆಪಿ ಮುಖಂಡರು ಈತನನ್ನು ಕರೆಸಿಕೊಂಡು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಘಟನೆಯ ವಿಡಿಯೊವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರು ಎನ್ನಲಾಗಿದೆ.
ಯುವಕನನ್ನು ಥಳಿಸಿದ್ದು ಮಾತ್ರವಲ್ಲದೇ ಸಿಂಗ್ ಸ್ಥಳೀಯ ಠಾಣೆಗೆ ನಂದಿ ವಿರುದ್ಧ ದೂರು ನೀಡಿದ್ದರು. ಆ ಬಳಿಕ ಸ್ಥಳೀಯ ಠಾಣೆಯ ಪೊಲೀಸರು ಆತನನ್ನು ಕರೆಸಿಕೊಂಡು ವಿಚಾರಣೆಗೆ ಗುರಿಪಡಿಸಿದರು.
ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಮನಃಸ್ಥಿತಿ ಉತ್ತರ ಪ್ರದೇಶ ಅಥವಾ ಗುಜರಾತ್ ಆಡಳಿತದ್ದೇ ವಿನಃ ತ್ರಿಪುರಾದ್ದಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂದಿ ಸಾಮಾಜಿಕ ಜಾಗೃತಿ ಮೂಡಿಸುವ ಹಲವು ವಿಡಿಯೊಗಳನ್ನೂ ಸೃಷ್ಟಿಸಿದ್ದರು. ಇತ್ತೀಚೆಗೆ ಈದ್ ಶುಭಾಶಯ ಹಾರೈಸುವ ಹಾಗೂ ಹಬ್ಬದ ಸುತ್ತಲಿನ ಹಾಡಿನ ಬಗ್ಗೆ ನಾಲ್ಕು ನಿಮಿಷಗಳ ವಿಡಿಯೊ ಪೋಸ್ಟ್ ಮಾಡಿದ್ದರು. ಈ ವಿಡಿಯೊದಲ್ಲಿ ಧರ್ಮಗಳ ನಡುವೆ ಸಾಮರಸ್ಯವನ್ನು ಬಿಂಬಿಸಿ, ಹಬ್ಬವನ್ನು ಸಂಭ್ರಮಿಸುತ್ತಿರುವ ದೃಶ್ಯ ಇದೆ. ಕೋಮು ಆಧಾರದಲ್ಲಿ ಪರಸ್ಪರ ಕಚ್ಚಾಡಿಕೊಳ್ಳದಂತೆ ಮನವಿ ಮಾಡಲಾಗಿದೆ.