ಅಧಿಕಾರ ತ್ಯಜಿಸಿದ ನಂತರ ಪುಲ್ವಾಮಾ ದಾಳಿ ಬಗ್ಗೆ ಪ್ರಶ್ನೆ ಎತ್ತುತ್ತಿದ್ದೇನೆ ಎಂಬ ಹೇಳಿಕೆ ತಪ್ಪು: ಸತ್ಯಪಾಲ್ ಮಲಿಕ್
ಜೈಪುರ: ಅಧಿಕಾರ ತ್ಯಜಿಸಿದ ನಂತರವೇ 2019ರ ಪುಲ್ವಾಮಾ ದಾಳಿಯ ಬಗ್ಗೆ ನಾನು ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ ಎಂದು ಹೇಳಿಕೆ ನೀಡಿರುವುದು ತಪ್ಪು ಎಂದು ಜಮ್ಮು -ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್(Satya Pal Malik) ಹೇಳಿದ್ದಾರೆ.
"ನಮ್ಮಿಂದ ಬೇರ್ಪಟ್ಟ ನಂತರ ಮಲಿಕ್ ಅವರು ಆರೋಪಗಳನ್ನು ಹೊರಿಸುತ್ತಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಸೋಮವಾರ ಮಲಿಕ್ ಪ್ರತಿಕ್ರಿಯೆ ನೀಡಿದರು.
ರಾಜಸ್ಥಾನದ ಸಿಕಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್ ಅವರು, "ನಾನು ಅಧಿಕಾರದಿಂದ ಹೊರಗಿರುವಾಗ ನಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಹೇಳಿಕೆ ನೀಡುವುದು ತಪ್ಪು. ಪುಲ್ವಾಮಾ ದಾಳಿಯ ದಿನದಂದೇ ನಾನು ಪ್ರಶ್ಬೆಗಳನ್ನು ಎತ್ತಿದ್ದೆ ಎಂದರು.
ಫೆಬ್ರವರಿ 2019 ರಲ್ಲಿ ಜಮ್ಮ-ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ವಾಹನಗಳ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಹುತಾತ್ಮರಾಗಿದ್ದರು. ಆಗ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದ ಮಲಿಕ್ ಘಟನೆಗೆ ಗುಪ್ತಚರ ವೈಫಲ್ಯ ಆಗಿತ್ತು ಎಂದು ಇತ್ತೀಚೆಗೆ ಆರೋಪಿಸಿದ್ದಲ್ಲದೆ ಕೇಂದ್ರ ಭದ್ರತಾ ಸಿಬ್ಬಂದಿಯ ಸಂಚಾರಕ್ಕೆ ಸರಕಾರ ವಿಮಾನವನ್ನು ನಿರಾಕರಿಸಿತ್ತು ಎಂದಿದ್ದರು.
ಇತ್ತೀಚೆಗೆ ಮಲಿಕ್ ಅವರಿಗೆ ಸಿಬಿಐ ಸಮನ್ಸ್ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ವಿರುದ್ಧದ ಟೀಕೆಗೆ ಸಂಬಂಧಿಸಿದೆ ಎಂಬ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ, ಕಳೆದ ವಾರ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ, ಅಂತಹ ಆರೋಪವು ನಿಜವಲ್ಲ ಬಿಜೆಪಿ ಮುಚ್ಚಿಡಬೇಕಾದ ಯಾವುದನ್ನೂ ಮಾಡಿಲ್ಲ ಎಂದು ನಾನು ಸಂಪೂರ್ಣ ದೃಢವಾಗಿ ಹೇಳಬಲ್ಲೆ. ನಮ್ಮಿಂದ ಬೇರ್ಪಟ್ಟ ನಂತರ ಯಾರಾದರೂ ಆರೋಪಗಳನ್ನು ಮಾಡುತ್ತಿದ್ದರೆ, ಅದಕ್ಕೆ ಅನುಗುಣವಾಗಿ . ಮಾಧ್ಯಮ ಮತ್ತು ಜನರು. ಮೌಲ್ಯಮಾಪನ ಮಾಡಬೇಕು ಎಂದರು.