ಪಠ್ಯದಿಂದ ಡಾರ್ವಿನ್ ಸಿದ್ಧಾಂತ ಕೈಬಿಟ್ಟ NCERT: 1800ಕ್ಕೂ ಅಧಿಕ ವಿಜ್ಞಾನಿಗಳು, ಶಿಕ್ಷಕರಿಂದ ಬಹಿರಂಗ ಪತ್ರ
ಹೊಸದಿಲ್ಲಿ: ಚಾರ್ಲ್ಸ್ ಡಾರ್ವಿನ್ ಅವರ ಮಾನವ ವಿಕಾಸ ಸಿದ್ಧಾಂತವನ್ನು 9ನೇ ಮತ್ತು 10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕಗಳಿಂದ ತೆಗೆದುಹಾಕಿರುವ ಎನ್ಸಿಇಆರ್ಟಿ ಕ್ರಮವನ್ನು ದೇಶಾದ್ಯಂತದ 1800ಕ್ಕೂ ಅಧಿಕ ವಿಜ್ಞಾನಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ವಿಜ್ಞಾನ ಪ್ರೇಮಿಗಳು ಆಕೇಪಿಸಿ ಎನ್ಸಿಇಆರ್ಟಿಗೆ ಬರೆಯಲಾಗಿರುವ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.
ಸಹಿ ಹಾಕಿದವರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಸಹಿತ ಹಲವು ಪ್ರತಿಷ್ಠಿತ ಸಂಸ್ಥೆಗಳ ಶಿಕ್ಷಣ ತಜ್ಞರು ಸೇರಿದ್ದಾರೆ. ಈ ಪತ್ರವಿರುವ ಪತ್ರಿಕಾ ಹೇಳಿಕೆಯನ್ನು ಬ್ರೇಕ್ಥ್ರೂ ಸಾಯನ್ಸ್ ಸೊಸೈಟಿ ಬಿಡುಗಡೆಗೊಳಿಸಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆಗೊಳಿಸಲು ಎನ್ಸಿಇಆರ್ಟಿ ಪಠ್ಯಕ್ರಮಗಳಿಗೆ ಕೆಲವೊಂದು ಮಾರ್ಪಾಟು ಮಾಡಿತ್ತು. ಅದರನ್ವಯ ಪಠ್ಯದಿಂದ “ಹೆರಿಡಿಟಿ ಎಂಡ್ ಇವೊಲ್ಯೂಶನ್” ಪಾಠದಿಂದ “ಇವೊಲ್ಯೂಶನ್” ಬಿಡಲಾಗಿರುವುದು ಟೀಕೆಗೆ ಗುರಿಯಾಗಿದೆ.
ಕೋವಿಡ್ ಸಂದರ್ಭ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆಗೊಳಿಸಲು ತಾತ್ಕಾಲಿಕ ಕ್ರಮವೆಂದು ತಿಳಿಯಲಾಗಿದ್ದರೆ ಈಗ ಎನ್ಸಿಇಆರ್ಟಿ ಈ ಮಾರ್ಪಾಟನ್ನು ಖಾಯಂಗೊಳಿಸಿರುವುದು ಆಘಾತಕಾರಿ, ಡಾರ್ವಿನ್ನ ಸಿದ್ಧಾಂತದ ಕುರಿತು ವಿದ್ಯಾರ್ಥಿಗಳು ಕಲಿಯುವುದು ಅತ್ಯವಶ್ಯ ಎಂದು ಪತ್ರದಲ್ಲಿ ಹೇಳಲಾಗಿದೆ.