ರಾಜ್ಯಪಾಲರುಗಳು ಮಸೂದೆಗಳಿಗೆ ಆದಷ್ಟು ಬೇಗ ಅಂಕಿತ ನೀಡಬೇಕು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ರಾಜ್ಯ ವಿಧಾನಸಭೆಗಳಿಂದ ಅಂಗೀಕಾರ ಪಡೆದ ಮಸೂದೆಗಳಿಗೆ ಸಂವಿಧಾನದ ವಿಧಿ 200 ಅನ್ವಯ ಆದಷ್ಟು ಬೇಗ ಅನುಮೋದನೆ ನೀಡುವುದು ತಮ್ಮ ಕರ್ತವ್ಯವಾಗಿದೆ ಎಂಬುದನ್ನು ರಾಜ್ಯಪಾಲರುಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಧಿ 200 ರಲ್ಲಿರುವ “ಆದಷ್ಟು ಬೇಗ” ಪದಗಳು ಪ್ರಾಮುಖ್ಯತೆ ಪಡೆದಿವೆ ಹಾಗೂ ಎಲ್ಲಾ ಸಂವಿಧಾನಿಕ ಪ್ರಾಧಿಕಾರಗಳು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠ ಹೇಳಿದೆ.
ತೆಲಂಗಾಣ ರಾಜ್ಯಪಾಲೆ ತಮಿಳುಸೈ ಸೌಂದರರಾಜನ್ ಅವರ ಮುಂದೆ ಬಾಕಿಯಿರುವ 10 ಮಸೂದೆಗಳಿಗೆ ಅನುಮೋದನೆ ನೀಡುವಂತೆ ಸೂಚಿಸಬೇಕೆಂದು ಕೋರಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಈಗ ರಾಜ್ಯಪಾಲರ ಮುಂದೆ ಯಾವುದೇ ಮಸೂದೆಗಳು ಬಾಕಿ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ ನಂತರ ಈ ಅರ್ಜಿಯನ್ನು ನ್ಯಾಯಾಲಯ ವಿಲೇವಾರಿಗೊಳಿಸಿದೆ.
“ಸಂಸದೀಯ ಪ್ರಜಾಪ್ರಭುತ್ವದಲ್ಲಿ ಯಾವುದೇ ಮಸೂದೆಗೆ ಅಂಕಿತ ನೀಡುವುದನ್ನು ಮುಂದೂಡುವ ಅಥವಾ ವಿಳಂಬಿಸುವ ವಿವೇಚನೆ ರಾಜ್ಯಪಾಲರಿಗಿಲ್ಲ ಎಂದು ತೆಲಂಗಾಣ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿತು.