ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಶೀಘ್ರ ಸಹಿ ಹಾಕಬೇಕು: ಸುಪ್ರೀಂಕೋರ್ಟ್
![ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಶೀಘ್ರ ಸಹಿ ಹಾಕಬೇಕು: ಸುಪ್ರೀಂಕೋರ್ಟ್ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಶೀಘ್ರ ಸಹಿ ಹಾಕಬೇಕು: ಸುಪ್ರೀಂಕೋರ್ಟ್](https://www.varthabharati.in/sites/default/files/images/articles/2023/04/25/375285-1682441169.jpeg)
ಹೊಸದಿಲ್ಲಿ,ಎ.25: ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಸಾಧ್ಯವಾದಷ್ಟು ಶೀಘ್ರ ಸಹಿ ಹಾಕುವುದು ಸಂವಿಧಾನದ ವಿಧಿ 200ರಡಿ ತಮ್ಮ ಹೊಣೆಗಾರಿಕೆಯಾಗಿದೆ ಎನ್ನುವುದನ್ನು ರಾಜ್ಯಪಾಲರು ನೆನಪಿಟ್ಟುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹೇಳಿದೆ.
ವಿಧಿ 200ರಲ್ಲಿಯ ‘ಸಾಧ್ಯವಾದಷ್ಟು ಶೀಘ್ರ ’ಪದಗಳು ಮಹತ್ವದ ಸಾಂವಿಧಾನಿಕ ಉದ್ದೇಶವನ್ನು ಹೊಂದಿವೆ ಮತ್ತು ಇದನ್ನು ಎಲ್ಲ ಸಾಂವಿಧಾನಿಕ ಪದಾಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರ ಪೀಠವು ತಿಳಿಸಿತು.
ತನ್ನ ಬಳಿ ಬಾಕಿಯಿರುವ 10 ಮಸೂದೆಗಳಿಗೆ ಒಪ್ಪಿಗೆ ನೀಡುವಂತೆ ರಾಜ್ಯದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ಆದೇಶಗಳನ್ನು ಕೋರಿ ತೆಲಂಗಾಣ ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.
ಸದ್ಯಕ್ಕೆ ಯಾವುದೇ ಮಸೂದೆ ರಾಜ್ಯಪಾಲರ ಬಳಿ ಬಾಕಿಯುಳಿದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ತಿಳಿಸಿದ ಬಳಿಕ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿಗೊಳಿಸಿತು.