ಎಂಆರ್ಪಿಎಲ್ 4ನೇ ಹಂತದ ಸಂತ್ರಸ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ: ಉಮಾನಾಥ ಕೋಟ್ಯಾನ್

ಮೂಲ್ಕಿ: ಚುನಾವಣೆ ಬಹಿಷ್ಕಾರ ಘೋಷಿಸಿರುವ ಸುರತ್ಕಲ್ ಸಮೀಪದ ಕುತ್ತೆತ್ತೂರು ಭಾಗದ ಎಂಆರ್ಪಿಎಲ್ ನಾಲ್ಕನೇ ಹಂತದ ಸಂತ್ರಸ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಹಾಗೂ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಮುಲ್ಕಿ ಪುನರೂರು ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಆರ್ಪಿಎಲ್ ನಾಲ್ಕನೇ ಹಂತಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವಾಗ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ಎಲ್ಲರೂ ನಿವೇಶನ ಕೊಡುವುದಕ್ಕೆ ಮುಂದೆ ಬಂದಿದ್ದಾರೆ. ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅವರಿಂದಲೂ ಮಾಹಿತಿ ತೆಗೆದುಕೊಂಡಿಲ್ಲ. ಅವರಿಗೆ ಉದ್ಯೋಗದ ಪರಿಹಾರ ಸಿಗಬೇಕಿದೆ. ಅದಕ್ಕಾಗಿ ಕೆಐಎಡಿಬಿಯಿಂದ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಎರಡು ಬಾರಿ ಸಭೆಯನ್ನೂ ನಡೆಸಲಾಗಿದೆ ಎಂದರು.
ಚುನಾವಣೆ ಬಹಿಷ್ಕಾರಕ್ಕೂ ಸಂಸದರು, ಶಾಸಕರು ಅವರ ಬಳಿ ಹೋಗಿಲ್ಲ ಎಂಬುವುದಕ್ಕೂ ಸಂಬಂಧವಿಲ್ಲ. ಅವರ ಚುನಾವಣೆ ಬಹಿಷ್ಕಾರ ರಾಜಕೀಯ ಪ್ರೇರಿತ. ಈ ಬಗ್ಗೆ ಸಂಸತ್ರಸ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಉಮಾನಾಥ ಕೋಟ್ಯಾನ್ ಸಹಿತ ಕರಾವಳಿಯ ಹೆಚ್ಚಿನ ಶಾಸಕರು ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿದ ಪ್ರಶ್ನೆಗೆ ಉಮಾನಾಥ ಕೋಟ್ಯಾನ್, ಸಾಮಾಜಿಕ ಜಾಲತಾಣಗಲ್ಲಿ ನಮ್ಮನ್ನು ವೈಯಕ್ತಿಕ ತೇಜೋವಧೆ ಮಾಡಬಾರದು ಎಂಬ ಉದ್ದೇಶದಿಂದ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಹೇಗಾದರೂ ಮಾಡಿಕೊಂಡು ಗೆಲ್ಲಬೇಕೆನ್ನುವ ಉದ್ದೇಶದಿಂದ ಫೇಸ್ಬುಕ್ಗಳಲ್ಲಿ 50-60 ಜನ ನಕಲಿ ಖಾತೆ ಮಾಡಿಕೊಂಡು ವೈಯಕ್ತಿಕ ತೇಜೋವಧೆ ಮಾಡುವವರ ವಿದುದ್ಧ ತಡೆಯಾಜ್ಞೆ ತರಲಾಗಿದೆ ವಿನಃ ವೈಯಕ್ತಿಕ ಕಾರಣಗಳಿಗಾಗಿ ತಂದಿಲ್ಲ ಎಂದು ನುಡಿದರು.
ಮೂಲ್ಕಿ ಮೂಡಬಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಳ್ಕುಂಜೆ ಭೂಮಿಗೆ ಸಂಬಂಧಿಸಿದ ಆಣೆ ಪ್ರಮಾಣಕ್ಕೂ ಮುನ್ನ ಅವರು "ನಾನೂ ಅಕ್ರಮವಾಗಿ 500 ಕೋಟಿ ರೂ. ಅಕ್ರಮ ಸಂಪಾದನೆ ಮಾಡಿರುವುದಾಗಿ ಹೇಳಿದ್ದರು. ನಾನು 5 ಕೋಟಿ ರೂ. ಅಕ್ರಮ ಹಣ ಸಂಪಾದನೆ ಮಾಡಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಅವರು ಬರಲಿ, ಆ ಬಳಿಕ ಅವರ ಬಳ್ಕುಂಜೆಯ ಭೂಮಿಗೆ ಸಂಬಂಧಿಸಿದ ಆಣೆ ಪ್ರಮಾಣಕ್ಕೆ ನಾನು ಸಿದ್ಧನಿದ್ದೇನೆ" ಎಂದು ಉಮಾನಾಥ ಕೋಟ್ಯಾನ್ ನುಡಿದರು.







