ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ - ಬಿಜೆಪಿ ಮಧ್ಯೆ ನೇರ ಸ್ಪರ್ಧೆ: ಇನಾಯತ್ ಅಲಿ
ಕಾಟಿಪಳ್ಳ, ಕುಳಾಯಿ, ಇಡ್ಯಾ ಪರಿಸರದಲ್ಲಿ ಕಾಂಗ್ರೆಸ್ ಪ್ರಚಾರ

ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಬುಧವಾರ ಕಾಟಿಪಳ್ಳ, ಇಡ್ಯಾ, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಪ್ರತೀ ಮನೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಅಭಿಯಾನವನ್ನು ಜನರ ಮುಂದಿಟ್ಟು ಜನರಲ್ಲಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಗೆಲುವಿಗೆ ದುಡಿಯುತ್ತಿರುವ ಕಾರ್ಯಕರ್ತರೇ ನನ್ನ ಬಲ ಎಂದು ಇನಾಯತ್ ನುಡಿದರು.
ಬಿಜೆಪಿ ಸರಕಾರದ ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಜನವಿರೋಧಿ ನಡೆಗಳಿಂದ ಜನತೆ ಕಂಗಾಲಾಗಿದ್ದಾರೆ. ಇಂತಹಾ ಭ್ರಷ್ಟ ಜನವಿರೋಧಿ ಸರಕಾರವನ್ನು ಅಧಿಕಾರಕ್ಕೆ ತಂದರೆ ಭವಿಷ್ಯ ಏನಾಗಬಹುದೆಂದು ಜನರು ಅರಿತಿದ್ದಾರೆ. ಹೀಗಾಗಿ ಈ ಬಾರಿ ಜನತೆ ಕಾಂಗ್ರೆಸ್ ಗೆ ಪೂರ್ಣ ಬಹುಮತ ನೀಡಿ ಆಶೀರ್ವದಿಸಲಿದ್ದಾರೆ ಎಂದರು.
ಪ್ರಚಾರದ ಸಂದರ್ಭ ಕಾಟಿಪಳ್ಳ ಜನತಾ ಕಾಲನಿಯ ಸಿರಿಗಳ ಬೀಡು, ಆಶ್ರಯ ಕಾಲನಿಯ ಕೊರಗಜ್ಜ ಕ್ಷೇತ್ರಕ್ಕೆ ಇನಾಯತ್ ಅಲಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಈ ವೇಳೆ ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಜಲೀಲ್ ಬದ್ರಿಯಾ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಮೊಯ್ದಿನ್ ಬಾವ ಪಕ್ಷಾಂತರದಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ:ಇನಾಯತ್ ಅಲಿ
ಕಾಂಗ್ರೆಸ್ ಪಕ್ಷದಿಂದ ಮೊಯ್ದಿನ್ ಬಾವ ಮಾತ್ರ ಪಕ್ಷಾಂತರಗೊಂಡಿದ್ದಾರೆ. ಅವರ ಜೊತೆ ವೈಯಕ್ತಿಕವಾಗಿ ಹಿಂದಿನಿಂದಲೂ ಅವರೊಂದಿಗಿದ್ದ ಬೆರಳೆಣಿಕೆಯ ಜನ ಅವರ ಜೊತೆಗೆ ಇದ್ದಾರೆ. ಈ ಬಾರಿ ಬಾವ 500-1000 ಮತ ಪಡೆಯಬಹುದು. ನಾವು 10ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಯಾಗಿದ್ದೆವು. ಪಕ್ಷ ನನಗೆ ಮಾತ್ರ ಟಿಕೆಟ್ ಕೊಟ್ಟಿದೆ. ಉಳಿದವರು ಇದಕ್ಕಾಗಿ ಪಕ್ಷ ತೊರೆದಿಲ್ಲ, ನನ್ನ ಜೊತೆ ಎಲ್ಲಾ ಹಂತದಲ್ಲೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಾವ ಪಕ್ಷ ತೊರೆದಿದ್ದರಲ್ಲಿ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ ಎಂದು ಇನಾಯತ್ ಅಲಿ ಹೇಳಿದ್ದಾರೆ.
"ಮಂಗಳೂರು ಉತ್ತರ ಕ್ಷೇತ್ರವನ್ನು ಭವಿಷ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಇಟ್ಟುಕೊಂಡು ಮತದಾರರನ್ನು ಭೇಟಿಯಾಗಿ ಮತ ಯಾಚನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿ, ಸಮುದಾಯವನ್ನು ಪ್ರೀತಿಸುವ, ಯುವಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ಗೃಹಿಣಿಯರಿಗೆ ನೆರವಾಗುವ ಸುಭದ್ರ ಸರಕಾರ ಜನರಿಗೆ ದೊರೆಯಲಿದೆ. ಜನಸಾಮಾನ್ಯರು ಜೀವನ ಸಾಗಿಸಲು ಯಾವುದೇ ರೀತಿಯಲ್ಲಿ ಭಯ ಪಡಬೇಕಾದ ಅಗತ್ಯವಿಲ್ಲ.
-ಇನಾಯತ್ ಅಲಿ
ಮಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ











