ಖತರ್ ನಲ್ಲಿ ಬೇಹುಗಾರಿಕೆ ಆರೋಪದಲ್ಲಿ ಸಂಭಾವ್ಯ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳು:ವರದಿ

ಹೊಸದಿಲ್ಲಿ: ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಎಂಟು ಭಾರತೀಯರು ಬೇಹುಗಾರಿಕೆ ಆರೋಪದಲ್ಲಿ ಕಳೆದ ಎಂಟು ತಿಂಗಳುಗಳಿಂದಲೂ ಖತರ್ ನಲ್ಲಿ ಏಕಾಂತ ಬಂಧನದಲ್ಲಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮೇ 3ರಂದು ನಡೆಯಲಿದ್ದು,ಸಂಭಾವ್ಯ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.
ಕ್ಯಾ. ನವತೇಜ ಸಿಂಗ್ ಗಿಲ್, ಕ್ಯಾ.ಬೀರೇಂದ್ರ ಕುಮಾರ ವರ್ಮಾ, ಕ್ಯಾ.ಸೌರಭ ವಶಿಷ್ಠ, ಕಮೊಡೋರ್ಗಳಾದ ಅಮಿತ್ ನಾಗಪಾಲ್, ಪೂರ್ಣೇಂದು ತಿವಾರಿ, ಸುಗುಣಾಕರ ಪಕಳ ಮತ್ತು ಸಂಜೀವ್ ಗುಪ್ತಾ ಹಾಗೂ ನಾವಿಕ ರಾಗೇಶ್ ಅವರು ಆರೋಪಿಗಳಾಗಿದ್ದಾರೆ.
ಭಾರತೀಯ ನೌಕಾಪಡೆಯ ಈ ಎಂಟು ಮಾಜಿ ಸಿಬ್ಬಂದಿಗಳು ಇಸ್ರೇಲ್ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪವನ್ನು ಹೊತ್ತಿದ್ದು, ಅವರ ವಿರುದ್ಧದ ವಿದ್ಯುನ್ಮಾನ ಸಾಕ್ಷ್ಯಾಧಾರಗಳು ಖತರ್ ಅಧಿಕಾರಿಗಳ ಬಳಿಯಲ್ಲಿವೆ ಎನ್ನಲಾಗಿದೆ.
ಇಟಲಿ ತಂತ್ರಜ್ಞಾನದ ಆಧಾರದಲ್ಲಿ ಬೇಹುಗಾರಿಕೆ ವೈಶಿಷ್ಟ್ಯಗಳೊಂದಿಗೆ ಮಿಡ್ಗೆಟ್ (150 ಟನ್ಗೂ ಕಡಿಮೆ ತೂಕದ) ಜಲಾಂತರ್ಗಾಮಿಗಳ ನಿರ್ಮಾಣದ ಅತ್ಯಂತ ಸೂಕ್ಷ್ಮ ಯೋಜನೆಯಲ್ಲಿ ಕೆಲಸ ಮಾಡಲು ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಆರೋಪಿಗಳು ಸೇರಿದಂತೆ ಭಾರತೀಯ ನೌಕಾಪಡೆಯ ಹಲವು ಮಾಜಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿತ್ತು.
ಭಾರತೀಯ ಏಜೆನ್ಸಿಗಳು ಈಗ ಪ್ರಕರಣವನ್ನು ಸಾಧ್ಯವಿರುವ ಅತ್ಯುನ್ನತ ಮಟ್ಟದಲ್ಲಿ ಕೈಗೆತ್ತಿಕೊಂಡಿವೆ, ಆದರೆ ಖತರ್ ಸರಕಾರವು ಈ ವಿಷಯದಲ್ಲಿ ಪಟ್ಟು ಸಡಿಲಿಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಭಾರತಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸಿರುವ ಸಾಧ್ಯತೆಯಿದೆ ಎಂದು ಈ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ದಹ್ರಾ ಗ್ಲೋಬಲ್ನ ಸಿಇಒ ಆಗಿರುವ ಒಮನ್ ವಾಯುಪಡೆಯ ಮಾಜಿ ಅಧಿಕಾರಿ ಖಾಮಿಸ್ ಅಲ್-ಆಜ್ಮಿ ಮತ್ತು ಖತರ್ನ ಅಂತರರಾಷ್ಟ್ರೀಯ ಮಿಲಿಟರಿ ಕಾರ್ಯಾರಣೆಗಳ ಮುಖ್ಯಸ್ಥ ಮೇ.ಜ.ತಾರಿಖ್ ಖಾಲಿದ್ ಅಲಿ ಉಬೈದಲಿ ಸೇರಿದಂತೆ ಇಬ್ಬರು ಖತರ್ ಪ್ರಜೆಗಳ ವಿರುದ್ಧವೂ ಆರೋಪಗಳನ್ನು ರೂಪಿಸಲಾಗಿದೆ. ಮೇ ಅಂತ್ಯದಲ್ಲಿ ಕಂಪನಿಯು ತನ್ನ ಕಾರ್ಯಾಚರಣೆಗಳನ್ನು ಮುಚ್ಚಲಿದೆ ಎಂದು ಉದ್ಯೋಗಿಗಳಿಗೆ ತಿಳಿಸಲಾಗಿದ್ದು,ಅವರು ತಮ್ಮ ಗುತ್ತಿಗೆಯ ನಿಬಂಧನೆಗಳಿಗೆ ಅನುಗುಣವಾಗಿ ಪರಿಹಾರ ಪ್ಯಾಕೇಜ್ ಪಡೆಯಲಿದ್ದಾರೆ.
ಈ ವ್ಯಕ್ತಿಗಳ ಭವಿಷ್ಯದ ಬಗ್ಗೆ ಅಥವಾ ಅವರ ಬಿಡುಗಡೆಗಾಗಿ ಖತರ್ ರಾಜಕೀಯ ನಾಯಕತ್ವದೊಂದಿಗೆ ಉನ್ನತ ಮಟ್ಟದ ಮಾತುಕತೆಗಳ ಕುರಿತು ಭಾರತೀಯ ರಾಜಕೀಯ ನಾಯಕತ್ವವು ಇದುವರೆಗೂ ತುಟಿ ಪಿಟಕ್ಕೆಂದಿಲ್ಲ ಎಂದು ವರದಿಯಾಗಿದೆ.
‘ಖತರ್ ನ ಅಧಿಕಾರಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ದೋಹಾದಲ್ಲಿನ ನಮ್ಮ ರಾಯಭಾರ ಕಚೇರಿಯು ಆರೋಪಿ ಭಾರತೀಯರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮೇ 3ರಂದು ಮುಂದಿನ ವಿಚಾರಣೆ ನಡೆಯಲಿದ್ದು,ಅದಕ್ಕೂ ಮುನ್ನ ಏನು ಮಾಡಬಹುದು ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು ತನ್ನ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.







