ಎ.28ರಿಂದ ‘ಮೈ ಮಣಿಪಾಲ್’ ಚಿತ್ರಕಲಾ ಪ್ರದರ್ಶನ

ಉಡುಪಿ, ಎ.26: ಮಣಿಪಾಲ ಕೆಎಂಸಿಯ ಎಂಡಿ ವೈದ್ಯಕೀಯ ವಿದ್ಯಾರ್ಥಿ ಡಾ.ಸಾಲ್ವ್ಯ ಎಸ್.ರಾಜ್ ಮಣಿಪಾಲ ಕುರಿತಾಗಿ ರಚಿಸಿದ ‘ಮೈ ಮಣಿಪಾಲ್’ ಜಲವರ್ಣ ಕಲಾಕೃತಿಗಳ ಪ್ರದರ್ಶನವನ್ನು ಎ.28ರಿಂದ ಮೇ 1ರವರೆಗೆ ಕುಂಜಿ ಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅದಿತಿ ಗ್ಯಾಲರಿಯಲ್ಲಿ ಇಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ, ಗ್ಯಾಲರಿಯಲ್ಲಿ ಸುಮಾರು 30ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಎ.28ರಂದು ಸಂಜೆ 5ಕ್ಕೆ ಮಾಹೆ ಸಹ ಕುಲಾಧಿಪತಿ ಡಾ.ಕಾರ್ಕಳ ಶರತ್ ಕುಮಾರ್ ಉದ್ಘಾಟಿಸಲಿರು ವರು. ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ರವಿರಾಜ್ ಆಚಾರ್ಯ ಮುಖ್ಯ ಅತಿಥಿಗಳಾಗಿರುವರು ಎಂದರು.
ಪ್ರದರ್ಶನವು ಎ.29ರಿಂದ ಮೇ 1ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಇವರು ಪ್ರವೃತ್ತಿಯಲ್ಲಿ ಜಲವರ್ಣ ಚಿತ್ರ ಕಲಾವಿದೆ. 8 ಅಂತಾರಾಷ್ಟ್ರೀಯ ಹಾಗೂ 6 ರಾಷ್ಟ್ರ , ಪ್ರಶಸ್ತಿಗಳು ಹಾಗೂ 65ಕ್ಕೂ ಅಧಿಕ ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. 7 ಕ್ಕೂ ಅಧಿಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ಈಗಾಗಲೇ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು..
ಈ ಸಂದರ್ಭದಲ್ಲಿ ಡಾ.ಸಾಲ್ವ್ಯ ಎಸ್.ರಾಜ್ ಹಾಜರಿದ್ದರು.








