ಕೊಂಚಾಡಿ: ಬೈಕ್ ಢಿಕ್ಕಿ; ಮಹಿಳೆ ಮೃತ್ಯು

ಮಂಗಳೂರು, ಎ.26: ನಗರ ಹೊರವಲಯದ ಯೆಯ್ಯಾಡಿ ಸಮೀಪದ ಕೊಂಚಾಡಿ ಬಳಿ ಬುಧವಾರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸರಿತಾ ಜುಡಿತ್ ಪಿಂಟೋ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸರಿತಾ ಜುಡಿತ್ ಪಿಂಟೋ ಎಂದಿನಂತೆ ಗುಜರಿ ಹೆಕ್ಕಲು ಗೋಣಿ ಚೀಲ ಹಿಡಿದುಕೊಂಡು ಪದವಿನಂಗಡಿ ಕಡೆಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪದವಿನಂಗಡಿ ಕಡೆಯಿಂದ ಬರುತ್ತಿದ್ದ ಬೈಕ್ ಢಿಕ್ಕಿಯಾಗಿದೆ.
ಇದರಿಂದ ಸರಿತಾ ಜುಡಿತ್ ಪಿಂಟೋ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರೂ ಪರೀಕ್ಷಿಸಿದ ವೈದ್ಯರು ಗಾಯಾಳು ಮಹಿಳೆಯು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಬಗ್ಗೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





