ರಾಜೇಶ್ ನಾಯ್ಕ್ಗೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ನಿಶ್ಚಿತ : ಹರಿಕೃಷ್ಣ ಬಂಟ್ವಾಳ್

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್ ನಾಯಕ್ ಈ ಬಾರಿ 25000ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದುಬರುವುದು ನಿಶ್ಚಿತ ಎಂದು ಕಿಯೋನಿಕ್ಸ್ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದ್ದಾರೆ.
ಬಿಜೆಪಿ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ರಾಜೇಶ ನಾಯ್ಕ್ 15900ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಳಿಕ ಅಲ್ಲಿನ ಚಿತ್ರಣವೇ ಬದಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ನುಡಿದರು.
೨೦೧೮ರಲ್ಲಿ ರಾಜೇಶ್ ನಾಯ್ಕ್ ಅವರು ಬಿಜೆಪಿ ಶಾಸಕರಾಗಿ ಗೆದ್ದು ಬಂದ ನಂತರ ಕ್ಷೇತ್ರದಲ್ಲಿ ಯಾವುದೇ ಕೋಮು ಹಿಂಸಾಚಾರಗಳು, ಗಲಭೆಗಳು ನಡೆದಿಲ್ಲ. ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತ, ಯಾರನ್ನೂ ಓಲೈಸದೆ ಅಭಿವೃದ್ಧಿ ಪರವಾದ ಸ್ವಚ್ಛ ರಾಜಕಾರಣ ಮಾಡುತ್ತ ಕ್ಷೇತ್ರದ ಚಿತ್ರಣವನ್ನು ಸಮಗ್ರವಾಗಿ ಬದಲಾಯಿಸಿದ್ದಾರೆ. ಇಂತಹ ಬದಲಾವಣೆ ಮತ್ತು ಶಾಂತಿ-ಸಾಮರಸ್ಯದ ಬದುಕಿಗಾಗಿ ರಾಜೇಶ್ ನಾಯಕ್ ಅವರನ್ನು ಪುನರಾಯ್ಕೆ ಮಾಡಲು ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಕೊರೋನ ನಂತರದ ಅವಧಿಯಲ್ಲಿ ರಾಜೇಶ್ ನಾಯ್ಕ್ ಅವರು ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ವಿಶೇಷವಾದ ಸಂಚಾರಿ ಐಸಿಯು ಒಂದನ್ನು ಕ್ಷೇತ್ರದ ಜನತೆಯ ಆರೋಗ್ಯ ಪಾಲನೆಗಾಗಿ ಪ್ರಾರಂಭಿಸಿ ದ್ದಾರೆ. ಇದು ಕರ್ನಾಟಕದಲ್ಲೇ ಮೊದಲ ಪ್ರಯತ್ನವಾಗಿದೆ. 59 ಗ್ರಾಮಗಳಿಗೆ ಈ ಸಂಚಾರಿ ಆಸ್ಪತ್ರೆ ಭೇಟಿ ನೀಡಿ ಜನರಿದ್ದಲ್ಲಿಗೇ ತೆರಳಿ ಆರೋಗ್ಯ ಸೇವೆ ನೀಡುತ್ತಿದೆ. ಇದುವರೆಗೆ ೧೭,೦೦೨ ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅಲ್ಲದೆ ಏಕಕಾಲಕ್ಕೆ ೭೫ ಜನರಿಗೆ ಡಯಾಲಿಸಿಸ್ ನಡೆಸುವ ಸೌಲಭ್ಯವನ್ನು ತಾಲೂಕು ಆಸ್ಪತ್ರೆಯಲ್ಲಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮುಖಂಡರಾದ ಮಾಧವ ಮಾವೆ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಸಂದೇಶ್ ಶೆಟ್ಟಿ ಮತ್ತು ರಣದೀಪ್ ಕಾಂಚನ್ ಉಪಸ್ಥಿತರಿದ್ದರು.







