ಭಾರತೀಯರ ತೆರವು ಕಾರ್ಯಾಚರಣೆ: ಪೋರ್ಟ್ ಸುಡಾನ್ ಗೆ ಮೂರನೇ ನೌಕೆ ಐಎನ್ಎಸ್ ತರಕಶ್ ರವಾನೆ
ಹೊಸದಿಲ್ಲಿ,ಎ.27: ಸಂಘರ್ಷ ಪೀಡಿತ ಸುಡಾನ್ ನಲ್ಲಿ ಸಿಕ್ಕಿಕೊಂಡಿರುವ ಭಾರತೀಯರ ತೆರವು ಕಾರ್ಯಾಚರಣೆಯಲ್ಲಿ ನೆರವಾಗಲು ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ತರಕಶ್ ಗುರುವಾರ ಪೋರ್ಟ್ ಸುಡಾನ್ ತಲುಪಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಮೋಹನ ಕ್ವಾತ್ರಾ ಇಂದು ಇಲ್ಲಿ ತಿಳಿಸಿದರು.
ಪ್ರಸಕ್ತ ಜಾರಿಯಲ್ಲಿರುವ ‘ಆಪರೇಷನ್ ಕಾವೇರಿ ’ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಮಾಹಿತಿ ನೀಡಿದ ಅವರು, ಭಾರತೀಯರ ತೆರವು ಕಾರ್ಯಾಚರಣೆಯನ್ನು ಬೆಂಬಲಿಸಿದ್ದಕ್ಕಾಗಿ ಭಾರತವು ಸೌದಿ ಅರೇಬಿಯಕ್ಕೆ ಋಣಿಯಾಗಿದೆ ಎಂದು ಹೇಳಿದರು. ಸುಡಾನ್ ನಲ್ಲಿರುವ ತನ್ನ ಪ್ರಜೆಗಳಿಗೆ ನೆರವಾಗಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಭಾರತವು ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ಎ.25ರಂದು 278 ಭಾರತೀಯ ಪ್ರಜೆಗಳನ್ನು ಕರೆತಂದಿದ್ದ ಐಎನ್ಎಸ್ ಸುಮೇಧಾ ಸುಡಾನ್ ಗೆ ಮರಳಿದ್ದು,ಇಂದು ಅಲ್ಲಿಗೆ ತಲುಪಿದೆ. ಅದೇ ದಿನ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಒಟ್ಟು 256 ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದಿವೆ. ಎ.26ರಂದು ಐಎನ್ಎಸ್ ತೇಗ್ ಮತ್ತು ಇನ್ನೆರಡು ವಿಮಾನಗಳ ಮೂಲಕ ಒಟ್ಟು 561 ಭಾರತಿಯರನ್ನು ಸುಡಾನ್ ನಿಂದ ತೆರವುಗೊಳಿಸಲಾಗಿದೆ ಎಂದು ಕ್ವಾತ್ರಾ ವಿವರಿಸಿದರು. ಪೋರ್ಟ್ ಸುಡಾನ್ನಿಂದ ಸೌದಿ ಅರೇಬಿಯದ ಜಿದ್ದಾ ಬಂದರಿಗೆ ಭಾರತೀಯರನ್ನು ಸಾಗಿಸಲು ಭಾರತಿಯ ನೌಕಾಪಡೆಯ ಹಡಗುಗಳನ್ನು ಬಳಸಿಕೊಳ್ಳಲಾಗುತ್ತಿದ್ದು,ಅಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.
ಖರ್ತೂಮ್ ಮತ್ತು ಅದರ ಉಪನಗರಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಮ್ದೂರಮಾನ್ ಮತ್ತು ಪೋರ್ಟ್ ಸುಡಾನ್ಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಸಂಘರ್ಷ ಆರಂಭಗೊಂಡ ತಕ್ಷಣ ಭಾರತೀಯ ರಾಯಭಾರಿ ಕಚೇರಿಯು ಸಾಧ್ಯವಾದಷ್ಟು ಭಾರತೀಯರನ್ನು ಸಂಪರ್ಕಿಸಿತ್ತು. ಜಿದ್ದಾ ಮತ್ತು ಪೋರ್ಟ್ ಸುಡಾನ್ ಗಳಲ್ಲಿ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಲಾಗಿದೆ ಎಂದು ಕ್ವಾತ್ರಾ ತಿಳಿಸಿದರು.
ಸುಡಾನ್ ನಲ್ಲಿ ಅತ್ಯಂತ ಪ್ರಕ್ಷುಬ್ಧ ಸ್ಥಿತಿಯಿದೆ. ತೆರವು ಕಾರ್ಯಾಚರಣೆ ವೇಳೆ ಭಾರತೀಯ ಸುರಕ್ಷತೆಯನ್ನು ಖಚಿತ ಪಡಿಸಲು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಜೊತೆ ಭಾರತವು ಸಂಪರ್ಕದಲ್ಲಿದೆ. ಖರ್ತೂಮ್ ನಗರದಿಂದ ಪೋರ್ಟ್ ಸುಡಾನ್ ಗೆ ಸಾಕಷ್ಟು ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಈಗಗಲೇ ಸುಮಾರು 1,700-2,000 ಜನರನ್ನು ಸಂಘರ್ಷ ಪೀಡಿತ ಪ್ರದೇಶದಿಂದ ಹೊರಕ್ಕೆ ತರಲಾಗಿದೆ ಎಂದರು.
ಸುಡಾನ್ನಲ್ಲಿರುವ ಭಾರತ ಮೂಲದ ಜನರಿಗೂ ಭಾರತವು ನೆರವಾಗಲಿದೆ. ನೂರಾರು ವರ್ಷಗಳಿಂದಲೂ ಭಾರತ ಮೂಲದ ಜನರು ಸುಡಾನಿನಲ್ಲಿ ವಾಸವಾಗಿದ್ದು,ಪ್ರಸ್ತುತ 900-1000 ಜನರು ಅಲ್ಲಿದ್ದಾರೆ . ಅವರು ಅಲ್ಲಿಯ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದಾರೆ.
-ವಿನಯ ಮೋಹನ ಕ್ವಾತ್ರಾ, ವಿದೇಶಾಂಗ ಕಾರ್ಯದರ್ಶಿ