ಜು.5ರವರೆಗೆ ಸುಳ್ಳು ಸುದ್ದಿ ತಪಾಸಣಾ ಘಟಕವನ್ನು ಸ್ಥಾಪಿಸುವುದಿಲ್ಲ: ಬಾಂಬೆ ಹೈಕೋರ್ಟ್ ಗೆ ಕೇಂದ್ರ ವಾಗ್ದಾನ
ಮುಂಬೈ, ಎ. 27: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸರಕಾರದ ವಿರುದ್ಧದ ‘‘ಸುಳ್ಳು ಸುದ್ದಿ’’ಗಳನ್ನು ಪತ್ತೆಹಚ್ಚುವ ಉದ್ದೇಶದ ವಾಸ್ತವಾಂಶ ಪತ್ತೆ ಘಟಕವನ್ನು ಜುಲೈ 5ರವರೆಗೆ ಸ್ಥಾಪಿಸುವುದಿಲ್ಲ ಎಂದು ಕೇಂದ್ರ ಸರಕಾರ ಗುರುವಾರ ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ. ಇತ್ತೀಚೆಗೆ ತಿದ್ದುಪಡಿಗೊಂಡ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತದೆ.
ಸರಕಾರದ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ವಿಭಾಗ ಪೀಠವೊಂದು ಸ್ವೀಕರಿಸಿತು. ವಾಸ್ತವಾಂಶ ಪತ್ತೆ ಘಟಕದ ಅನುಪಸ್ಥಿತಿಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳು ಜಾರಿಗೊಳ್ಳುವುದಿಲ್ಲ. ಹಾಗಾಗಿ, ತಿದ್ದುಪಡಿಗಳಿಗೆ ತಡೆಯಾಜ್ಞೆ ಕೋರಿ ಸ್ಟಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕಾಮ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಜೂನ್ 8ಕ್ಕೆ ನಿಗದಿಪಡಿಸಿತು.
ವಾಸ್ತವಾಂಶ ಪತ್ತೆ ಘಟಕವನ್ನು ಜುಲೈ 5ರವರೆಗೆ ಸ್ಥಾಪಿಸಲಾಗುವುದಿಲ್ಲ, ಹಾಗಾಗಿ, ಬೇಸಿಗೆ ರಜೆಯ ಬಳಿಕ ಪುನರಾರಂಭಗೊಂಡಾಗ ಜೂನ್ ನಲ್ಲಿ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮಾಡಬಹುದು ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಹೈಕೋರ್ಟ್ ಗೆ ಹೇಳಿದರು.
ನ್ಯಾಯಾಲಯವು ಗುರುವಾರವೇ ಅರ್ಜಿಯ ವಿಚಾರಣೆ ನಡೆಸಿ ಮಧ್ಯಾಂತರ ಪರಿಹಾರ ನೀಡಬೇಕೆಂದು ಕಾಮ್ರ ಪರವಾಗಿ ವಾದಿಸಿದ ವಕೀಲ ಡೇರಿಯಸ್ ಖಂಬಾತ ಹೇಳಿದರು. ವಾಸ್ತವಾಂಶ ಪರಿಶೀಲನೆ ಘಟಕ ಸ್ಥಾಪನೆಯಾಗದಿದ್ದರೂ ತಿದ್ದುಪಡಿಗೊಂಡ ನಿಯಮಗಳು ಭಯಾನಕ ಪರಿಣಾಮವನ್ನು ಬೀರುತ್ತವೆ ಎಂದು ಅವರು ವಾದಿಸಿದರು.
ಆದರೆ, ಘಟಕವು ಸ್ಥಾಪನೆಯಾಗುವವರೆಗೆ ತಿದ್ದುಪಡಿಗೊಂಡ ನಿಯಮಗಳು ಬಳಕೆಯಲ್ಲಿರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
‘‘ಈಗಿನಂತೆ, ವಾಸ್ತವಾಂಶ ಪರಿಶೀಲನಾ ಘಟಕ ಅಥವಾ ಸಮಿತಿಯಿಲ್ಲದೆ ತಿದ್ದುಪಡಿಗೊಂಡ ನಿಯಮಗಳನ್ನು ಯಾವುದಕ್ಕೂ ಅನ್ವಯಿಸಲಾಗದು. ಘಟಕ ಸ್ಥಾಪನೆಯಾದ ಬಳಿಕ, ನಿಯಮಗಳು ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆಯೇ ಇಲ್ಲವೇ ಎನ್ನುವುದು ಆ ಹಂತದಲ್ಲಷ್ಟೇ ತಿಳಿಯುತ್ತದೆ’’ ಎಂದು ಹೈಕೋರ್ಟ್ ಹೇಳಿತು.
ತಾನು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹಾಕುವ ಹೇಳಿಕೆಗಳು ಅಥವಾ ವಿಡಂಬನೆಗಳಿಗಾಗಿ ಮುಂದೆ ಕ್ರಮ ಎದುರಿಸಬೇಕಾಗಬಹುದು ಎನ್ನುವುದು ಕಾಮ್ರರ ವಾದವಾಗಿದ್ದರೆ, ‘‘ನೀವು ರಜೆ ತೆಗೆದುಕೊಳ್ಳಿ’’ ಎಂದು ನ್ಯಾ. ಪಟೇಲ್ ಲಘು ಧಾಟಿಯಲ್ಲಿ ಹೇಳಿದರು. ‘‘ಬೇಸಿಗೆ ರಜೆ ತೆಗೆದುಕೊಳ್ಳಿ. ನೀವು ವಿಶ್ರಾಂತಿ ತೆಗೆದುಕೊಳ್ಳಬಹುದು, ಅದು ನಿಮಗೆ ಬಿಟ್ಟದ್ದು’’ ಎಂದು ನ್ಯಾ. ಪಟೇಲ್ ನುಡಿದರು.
ಈ ವಿಷಯದಲ್ಲಿ ಕಾರ್ಯಾಂಗದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವುದಕ್ಕಾಗಿ ಅರ್ಜಿಗೆ ತಿದ್ದುಪಡಿ ತರಲು ನ್ಯಾಯಾಲಯವು ಕಾಮ್ರಗೆ ಅನುಮೋದನೆ ನೀಡಿತು.
2021ರ ಮಾಹಿತಿ ತಂತ್ರಜ್ಞಾನ (ಇಂಟರ್ಮೀಡಿಯರಿ ಗೈಡ್ಲೈನ್ಸ್ ಆ್ಯಂಡ್ ಡಿಜಿಟಲ್ ಮೀಡಿಯಾ ಎತಿಕ್ಸ್ ಕೋಡ್) ನಿಯಮಗಳಿಗೆ ತರಲಾಗಿರುವ ನಿರ್ದಿಷ್ಟ ತಿದ್ದುಪಡಿಗಳನ್ನು ಕೇಂದ್ರ ಸರಕಾರವು ಎಪ್ರಿಲ್ 6ರಂದು ಜಾರಿಗೊಳಿಸಿತ್ತು. ಇವುಗಳ ಪೈಕಿ, ಸರಕಾರದ ವಿರುದ್ಧ ‘‘ಸುಳ್ಳು ಸುದ್ದಿ’’ಗಳನ್ನು ಹರಡುವ ಸಾಮಾಜಿಕ ಮಾಧ್ಯಮ ಬರಹಗಳನ್ನು ತಪಾಸಣೆಗೆ ಒಳಪಡಿಸಲು ವಾಸ್ತವಾಂಶ ಪರಿಶೀಲನೆ ಘಟಕ ಸ್ಥಾಪಿಸುವುದೂ ಒಂದಾಗಿದೆ.
ಹೊಸ ನಿಯಮಗಳ ಆಧಾರದಲ್ಲಿ ಸರಕಾರವು ನನ್ನ ಬರಹಗಳನ್ನು ಏಕಪಕ್ಷೀಯವಾಗಿ ಬ್ಲಾಕ್ ಮಾಡಬಹುದಾಗಿದೆ ಅಥವಾ ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತು ಅಥವಾ ನಿಷ್ಕ್ರಿಯಗೊಳಿಸಬಹುದಾಗಿದೆ ಹಾಗೂ ಆ ಮೂಲಕ ನನಗೆ ವೃತ್ತಿಪರವಾಗಿ ಹಾನಿ ಮಾಡಬಹುದಾಗಿದೆ ಎಂದು ತನ್ನ ಅರ್ಜಿಯಲ್ಲಿ ಕಾಮ್ರ ಹೇಳಿದ್ದಾರೆ.
ತಿದ್ದುಪಡಿಗೊಂಡ ನಿಯಮಗಳು ಅಸಾಂವಿಧಾನಿಕ ಎಂಬುದಾಗಿ ಘೋಷಿಸಬೇಕು ಮತ್ತು ಈ ನಿಯಮಗಳ ಅಡಿಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತಿದ್ದುಪಡಿಗೊಂಡ ನಿಯಮಗಳನ್ವಯ, ವಾಸ್ತವಾಂಶ ಪರಿಶೀಲನಾ ಘಟಕಗಳು ‘‘ಸುಳ್ಳು’’ ಎಂದು ಹೇಳುವ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳು ತಮ್ಮ ವೇದಿಕೆಗಳಿಂದ ತೆಗೆದುಹಾಕಬೇಕಾಗುತ್ತದೆ. ಇಲ್ಲದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪರಿಚ್ಛೇದ 79ರಡಿಯಲ್ಲಿ ನೀಡಲಾಗಿರುವ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಅವುಗಳು ಕಳೆದುಕೊಳ್ಳಬೇಕಾಗಬಹುದು.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೂರನೇ ವ್ಯಕ್ತಿಗಳು ಹಾಕುವ ಸಂದೇಶಗಳಿಂದ ಅವುಗಳಿಗೆ ರಕ್ಷಣೆಯನ್ನು ‘ಸೇಫ್ ಹಾರ್ಬರ್’ ನೀಡುತ್ತದೆ.