ಬೆಂಗಳೂರು: ಎಐಎಡಿಎಂಕೆ ಅಭ್ಯರ್ಥಿಯೆಂದು ಆಯೋಗಕ್ಕೆ ವಂಚಿಸಲು ಯತ್ನ; ಎಫ್ಐಆರ್ ದಾಖಲು

ಬೆಂಗಳೂರು, ಎ.27: ನಾಮಪತ್ರ ಸಲ್ಲಿಕೆ ವೇಳೆ ಎಐಎಡಿಎಂಕೆ ಅಭ್ಯರ್ಥಿಯೆಂದು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಕುಮಾರ್ ಕಣ್ಣನ್ ವಿರುದ್ಧ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ಆಭ್ಯರ್ಥಿಯಾಗಿ ಕುಮಾರ್ ಕಣ್ಣನ್ ಎಂಬುವರು ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಯಲ್ಲಿ ಓ ಪನ್ನೀರ್ ಸೆಲ್ವಂ ಸಹಿಯಿತ್ತು. ವಾಸ್ತವವಾಗಿ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕುಮಾರ್ ಕಣ್ಣನ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಚುನಾವಣಾ ಆಯೋಗ ಪರಿಗಣಿಸಿತ್ತು.
ಆಯೋಗಕ್ಕೆ ವಂಚಿಸಲು ಯತ್ನಿಸಿದ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಯೊಬ್ಬರು ಕುಮಾರ್ ಕಣ್ಣನ್ ವಿರುದ್ಧ ದೂರು ನೀಡಿದ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





