ತೇಜಸ್ವಿನಿ ಅನಂತಕುಮಾರ್ಗೂ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: 'ಬಿಜೆಪಿಯಲ್ಲಿ ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ಗೂ ಆಗಿದೆ. ತೇಜಸ್ವಿನಿಗೂ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ' ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಶೆಟ್ಟರ್ ಮುಖ ನೋಡಿ ಓಟ್ ಹಾಕ್ತೀವಿ ಅನ್ನೋ ಭಾವನೆ ಕ್ಷೇತ್ರದ ಜನರಲ್ಲಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಸವಾಲನ್ನು ಜನರೇ ಸ್ವೀಕರಿಸುತ್ತಿದ್ದಾರೆ. ಎಲ್ಲರೂ ನಮ್ಮನ್ನು ಗೆಲ್ಲಿಸಿ ಅಂತಾ ಅಭಿಯಾನ ಮಾಡಿದರೆ, ಬಿಜೆಪಿಯರು ಶೆಟ್ಟರ್ ಸೋಲಿಸಿ ಅಂತಾ ಅಭಿಯಾನ ಮಾಡ್ತಿದ್ದಾರೆ' ಎಂದು ಕಿಡಿಕಾರಿದರು.
'ಬಿಜೆಪಿ ನಾಯಕರಿಗೆ ಬೇರೆ ಕ್ಷೇತ್ರಗಳಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿಂತೆಯಿಲ್ಲ, ಕೇವಲ ಶೆಟ್ಟರ್ ಒಬ್ಬರನ್ನು ಸೋಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷ ಬಿಟ್ಟು ಹೊರಗೆ ಬಂದಮೇಲೆ ಶೆಟ್ಟರ್ ಶಕ್ತಿ ಏನಂತಾ ಅವರಿಗೆಲ್ಲ ಗೊತ್ತಾಗಿದೆ' ಎಂದರು.
''ಕೇಂದ್ರ ಮಂತ್ರಿಗಳು ಎಲ್ಲಾ ಕಾರ್ಪೋರೇಟರ್ಗಳ ಮೇಲೆ ನಿಗಾ ಇಟ್ಟಿದ್ದಾರೆ. ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟು ಕಾಯುತ್ತಿದ್ದಾರೆ.ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಮಾತ್ರವಲ್ಲದೇ, ಕಾಂಗ್ರೆಸ್ ಕಾರ್ಪೊರೇಟರ್ಗಳಿಗೂ ಬೆದರಿಕೆ ಹಾಕುತ್ತಿದ್ದಾರೆ'' ಎಂದು ಆರೋಪಿಸಿದರು.







