ಹಿಂಬಾಗಿಲ ರಾಜಕೀಯ ಮಾಡುವುದು ಬಿ.ಎಲ್.ಸಂತೋಷ್ ಸ್ವಭಾವ: ಜಗದೀಶ್ ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ, ಎ. 28: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ಗೆ ನೇರವಾಗಿ ಹೋರಾಡಲು ಸಾಧ್ಯವಿಲ್ಲ. ಅವರು ಏನಿದ್ದರೂ ಹಿಂಬಾಗಿಲ ಮೂಲಕ ರಾಜಕೀಯ ಮಾಡುವ ಸ್ವಭಾದವರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಲ್. ಸಂತೋಷ್ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಿದವರ ಪೈಕಿ ನಾನು ಮೊದಲಿಗ. ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ತಪ್ಪಿಸಿದ್ದು ಇದೇ ಬಿ.ಎಲ್. ಸಂತೋಷ್ ಎಂದು ದೂರಿದರು.
ಯಡಿಯೂರಪ್ಪ, ಈಶ್ವರಪ್ಪ ನನಗೆ ಬೈದರೆ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ನಾನು ಜನರ ಸಹಕಾರದಿಂದ ರಾಜಕೀಯ ಮಾಡುತ್ತಿದ್ದೇನೆ ಹೊರತು, ಯಾವುದೊ ಲಾಬಿ ಮಾಡಿ, ಯಾರದ್ದೊ ಕೈ ಕಾಲು ಹಿಡಿದು ರಾಜಕೀಯ ಮಾಡುವವನಲ್ಲ. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದು ಬಿಟ್ಟು, ಸಂತೋಷ್ ನೇರವಾಗಿ ನನ್ನ ಜೊತೆ ಯುದ್ಧಕ್ಕೆ ಬರಲಿ ಎಂದು ಜಗದೀಶ್ ಶೆಟ್ಟರ್ ಸವಾಲು ಹಾಕಿದರು.
ಬಿಜೆಪಿ ಪಕ್ಷವನ್ನು ಬಿಟ್ಟು ಹೊರಗೆ ಬಂದ ಬಳಿಕ ಸಿದ್ಧಾಂತವನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಬಿಜೆಪಿ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಶಾಸಕರನ್ನು ಕರೆದುಕೊಂಡು ಬಂದು ಸರಕಾರ ರಚನೆ ಮಾಡಿದಾಗ ಇವರ ಸಿದ್ಧಾಂತ ಎಲ್ಲಿಗೆ ಹೋಗಿತ್ತು? ಕಾಂಗ್ರೆಸ್ನವರ ಸಿದ್ಧಾಂತದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಅವರು ತಿರುಗೇಟು ನೀಡಿದರು.
ಪ್ರತಿಯೊಂದು ಸವಾಲುಗಳನ್ನು ಎದುರಿಸುತ್ತೇನೆ. ಬಿಜೆಪಿಯವರು ನನಗೆ ಎಷ್ಟು ಟೀಕಿಸುತ್ತಾರೋ ನಾನು ಅಷ್ಟೇ ಗೆಲುವಿನ ಕಡೆಗೆ ಹೋಗುತ್ತೇನೆ. ಎಲ್ಲರೂ ನಮ್ಮನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಮಾತ್ರ ಶೆಟ್ಟರ್ ಸೋಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಕಿರುವ ಸವಾಲನ್ನು ನನ್ನ ಕ್ಷೇತ್ರದ ಜನತೆಯೆ ಸ್ವೀಕರಿಸಿದ್ದಾರೆ. ಈ ಚುನಾವಣೆಯಲ್ಲಿ ನಾನು ಐತಿಹಾಸಿಕ ಗೆಲುವು ಸಾಧಿಸುವುದು ನಿಶ್ಚಿತ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯವಾಗಿ ನನ್ನನ್ನು ಮೂಲೆ ಗುಂಪು ಮಾಡಲು ಷಡ್ಯಂತ್ರ ಮಾಡಿದ್ದರು. ನನ್ನ ಬಗ್ಗೆ ಜನರಲ್ಲಿ ಅನುಕಂಪ ಇದೆ. ನಾನು ಪಕ್ಷ ಬಿಟ್ಟು ಹೊರಗೆ ಬಂದ ಮೇಲೆ ಅವರಿಗೆ ನನ್ನ ಶಕ್ತಿ ಏನು ಎಂದು ಗೊತ್ತಾಗಿದೆ. ಆದುದರಿಂದಲೆ, ಪ್ರತಿದಿನ ಒಬ್ಬೊಬ್ಬ ನಾಯಕರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ಮೇಲೆ ಕೇಂದ್ರ ಸಚಿವರು ನಿಗಾ ಇಟ್ಟಿದ್ದಾರೆ. ಬಿಜೆಪಿಯಲ್ಲಿರುವ ತಮ್ಮ ಬೆಂಬಲಿಗ ಕಾರ್ಪೋರೇಟರ್ಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಗ ಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.







