ಮತದಾರರನ್ನು ಗೊಂದಲಕ್ಕೀಡು ಮಾಡಲು ಹಲವೆಡೆ ಡಮ್ಮಿ ಅಭ್ಯರ್ಥಿಗಳು: ವರದಿ

ಬೆಂಗಳೂರು: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 389 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ನೈಜ ಸ್ಪರ್ಧಾಳುಗಳಲ್ಲ ಬದಲು ಡಮ್ಮಿ ಅಭ್ಯರ್ಥಿಗಳಾಗಿದ್ದಾರೆ ಎಂದು deccanherald.com ವರದಿ ಮಾಡಿದೆ.
ಯಲಹಂಕ ಕ್ಷೇತ್ರದಲ್ಲಿ ಗರಿಷ್ಠ 20 ಅಭ್ಯರ್ಥಿಗಳಿದ್ದರೆ ಶಾಂತಿನಗರ ಮತ್ತು ಸಿ ವಿ ರಮನ್ ನಗರ ಕ್ಷೇತ್ರಗಳಲ್ಲಿ ತಲಾ 10 ಅಭ್ಯರ್ಥಿಗಳಿದ್ದಾರೆ.
ಯಲಹಂಕದಲ್ಲಿ ಕಣದಲ್ಲಿರುವವರ ಪೈಕಿ ಜೆಡಿ(ಎಸ್) ಅಭ್ಯರ್ಥಿ ಸಹಿತ ನಾಲ್ಕು ಅಭ್ಯರ್ಥಿಗಳ ಹೆಸರು ಮುನೇಗೌಡ ಆಗಿದೆ. ಬಿಜೆಪಿಯ ಎಸ್ ಆರ್ ವಿಶ್ವನಾಥ್ ಸಹಿತ ಇಬ್ಬರು ಅಭ್ಯರ್ಥಿಗಳ ಹೆಸರು ವಿಶ್ವನಾಥ್ ಆಗಿದೆ. ಮತದಾರರನ್ನು ಗೊಂದಲಕ್ಕೀಡು ಮಾಡಲು ರಾಜಕೀಯ ಪಕ್ಷಗಳು ಅದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ ಎನ್ನಲಾಗಿದೆ.
ರಾಜಾಜಿನಗರ ಮತ್ತು ಬ್ಯಾಟರಾಯನಪುರದಲ್ಲೂ ತಲಾ 18 ಮತ್ತು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಆಗಿದ್ದರೆ ಅದೇ ಹೆಸರಿನ ಇನ್ನೊಬ್ಬರೂ ಕಣದಲ್ಲಿದ್ದಾರೆ. ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಹೊರತುಪಡಿಸಿ ಇತರ ಅಭ್ಯರ್ಥಿಗಳು ಅಪರಿಚಿತ ರಾಜಕೀಯ ಪಕ್ಷಗಳವರಾಗಿದ್ದಾರೆ.
ಜಯನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯ ರೆಡ್ಡಿ ಸ್ಪರ್ಧಿಸುತ್ತಿದ್ದರೆ ಅದೇ ಹೆಸರಿನ ಸ್ವತಂತ್ರ ಅಭ್ಯರ್ಥಿಯೊಬ್ಬರೂ ಕಣದಲ್ಲಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರರನ್ನೇ ಹೋಲುವ ಮೂವರು ಇತರರು ಕಣದಲ್ಲಿದ್ದಾರೆ. ಬಿಟಿಎಂ ಲೇಔಟ್ನಲ್ಲಿ ಬಿಜೆಪಿ ಕೆ ಆರ್ ಶ್ರೀಧರ್ ಅವರನ್ನು ಕಣಕ್ಕಿಳಿಸಿದ್ದರೆ ಶ್ರೀಧರ್ ಹೆಸರಿನ ಇತರ ನಾಲ್ಕು ಮಂದಿ ಕಣದಲ್ಲಿದ್ದಾರೆ.
ಸರಾಸರಿಯಾಗಿ ಪ್ರತಿ ಕ್ಷೇತ್ರದಲ್ಲಿ 12 ರಿಂದ 14 ಅಭ್ಯರ್ಥಿಗಳಿದ್ದು ಹಲವೆಡೆ ಪ್ರಬಲ ಅಭ್ಯರ್ಥಿಗಳ ಮತಗಳು ಹಂಚಿಕೆಯಾಗಿ ಹೋಗುವಂತೆ ಮಾಡಲು ಪಕ್ಷೇತರರನ್ನು ಕಣಕ್ಕಿಳಿಸಲಾಗಿದೆ ಎಂಬುದು ತಿಳಿದು ಬರುತ್ತದೆ ಎಂದು deccanherald.com ವರದಿ ಮಾಡಿದೆ.







