ಉಡುಪಿ: ಮನೆಯಲ್ಲೇ ಮತದಾನ ಹಕ್ಕು ಚಲಾಯಿಸಿದ ಹಿರಿಯರು, ವಿಕಲಚೇತನರು

ಉಡುಪಿ, ಎ.29: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ, ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಒದಗಿಸಿದ್ದು, ಅದರಂತೆ ಈ ಸೌಲಭ್ಯವನ್ನು ಜಿಲ್ಲೆಯ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸದುಪಯೋಗಪಡಿಸಿಕೊಳ್ಳುತಿದ್ದಾರೆ.
ಜಿಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡ ಮನೆಯಲ್ಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಹಲವು ಮಂದಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಬಳಸಿಕೊಂಡು ತಮ್ಮ ಮತದ ಹಕ್ಕನ್ನು ಚಲಾಯಿಸಿ ಅದನ್ನು ಮತಪೆಟ್ಟಿಗೆಯಲ್ಲಿ ಭದ್ರ ಪಡಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಸೆಕ್ಟರ್ 17ರಲ್ಲಿ ಕಿದಿಯೂರು ಗ್ರಾಮದ 83 ವರ್ಷದ ಸುನಂದ ಭಟ್ ತಮ್ಮ ಸೊಸೆ ಶೋಭಾ ಭಟ್ ಸಹಕಾರದಿಂದ ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಿದರು. ಅದೇ ರೀತಿ ಕಿದಿಯೂರು ಗ್ರಾಮದ 87 ವರ್ಷದ ಸೀತಾರಾಮ ಭಟ್ ಮತ್ತು 81 ವರ್ಷದ ಉಷಾ ಭಟ್ ದಂಪತಿಗಳು ಮನೆಯವರ ಸಹಕಾರ ಪಡೆಯದೇ ತಾವೇ ಸ್ವಯಂ ಮತ ಚಲಾಯಿಸಿ, ತಮ್ಮ ಮತವನ್ನು ಹೆಮ್ಮೆಯಿಂದ ಚಲಾಯಿಸಿ ಮತಪತ್ರ ವನ್ನು ಮತಪೆಟ್ಟಿಗೆಗೆ ಹಾಕಿದರು.
ಮತದಾನ ಮಾಡಿದ ನಂತರ ಮಾತನಾಡಿದ ಸೀತಾರಾಮ ಭಟ್, ವಯೋ ಸಹಜತೆಯಿಂದ ನಡೆಯಲು ತುಂಬಾ ಕಷ್ಟವಾಗುತ್ತಿದ್ದು, ಮತದಾನ ಕೇಂದ್ರಕ್ಕೆ ತೆರಳುವುದು ಅಸಾಧ್ಯವಾಗಿತ್ತು, ಈ ಸೌಲಭ್ಯದಿಂದ ಅನುಕೂಲವಾಗಿದ್ದು, ಮನೆಯಿಂದಲೇ ಹಕ್ಕು ಚಲಾಯಿಸಿರುವುದು ಸಂತಸ, ತೃಪ್ತಿ ತಂದಿದೆ ಎಂದರು.
ಇಂದು ಮತದಾನ ಕಾರ್ಯಕ್ರಮಕ್ಕೆ ಮನೆಗೆ ಆಗಮಿಸುವ ಕುರಿತಂತೆ ಮುಂಚಿತವಾಗಿಯೇ ಬಿಎಲ್ಓಗಳ ಮೂಲಕ ಸಂಬಂಧಪಟ್ಟ ಮತದಾರರಿಗೆ ಮಾಹಿತಿ ನೀಡಿದ್ದು, ಅಗತ್ಯ ಗುರುತು ದಾಖಲೆಗಳನ್ನು ಸಿದ್ದವಾಗಿಟ್ಟು ಕೊಳ್ಳುವಂತೆ ಹಾಗೂ ಅನಿವಾರ್ಯ ಮತ್ತು ತುರ್ತು ಸಂದರ್ಭ ಹೊರತು ಪಡಿಸಿ ಹೊರಗೆ ತೆರಳದೇ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿತ್ತು.
ಮತದಾನ ಪೆಟ್ಟಿಗೆ ಮತ್ತು ಮತದಾನ ಪ್ರಕ್ರಿಯೆಗೆ ಅಗತ್ಯವಿದ್ದ ಉಪಕರಣಗಳೊಂದಿಗೆ ಬಿಎಲ್ಓ ಅವರ ನೆರವಿ ನಿಂದ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರ ಮನೆಗೆ ತೆರಳಿ, ಚುನಾವಣಾ ಆಯೋಗ ನೀಡಿದ ಎಲ್ಲಾ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲಿಸಿ, ಯಾವುದೇ ಸಂದರ್ಭದಲ್ಲೂ ಮತದಾನದ ಗೌಪ್ಯತೆ ಉಲ್ಲಂಘನೆ ಆಗದಂತೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಲಾಯಿತು.
ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸುದಿನ ಅವರು, ಮತದಾನ ಮಾಡುವ ಪ್ರಕ್ರಿಯೆಗಳ ಕುರಿತು ಹಿರಿಯ ನಾಗರಿಕರಿಗೆ ಸಂಪೂರ್ಣ ಮಾಹಿತಿ ನೀಡಿ, ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೇ ಮತದಾನ ಮಾಡುವಂತೆ ತಿಳಿಸಿದರು.
ಮೈಕ್ರೋ ಅಬ್ಸರ್ವರ್ ತರುಣ್ ಕುಮಾರ್, ಸಹಾಯಕ ಮತಗಟ್ಟೆ ಅಧಿಕಾರಿ ವಿಷ್ಣು ಮೊಗೇರಾ, ಬಿಎಲ್ಓ ಗೀತಾ ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದರು.
