ಉಡುಪಿ: ಆಮ್ ಆದ್ಮಿ ಪಕ್ಷಕ್ಕೆ ಜಿಲ್ಲಾಧ್ಯಕ್ಷರು ಸೇರಿ ಮೂವರ ರಾಜೀನಾಮೆ

ಉಡುಪಿ, ಎ.29: ಪಕ್ಷದ ರಾಜ್ಯ ನಾಯಕರ ಧೋರಣೆಯಿಂದ ಬೇಸತ್ತು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾಲ್ಫಿ ವಿಕ್ಟರ್ ಲೂಯಿಸ್, ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ದಿವಾಕರ ಸನಿಲ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿರಾಜ್ ಪೂಜಾರಿ ಪಕ್ಷಕ್ಕೆ ತಮ್ಮ ರಾಜಿನಾಮೆಯನ್ನು ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ದಿವಾಕರ ಸನಿಲ್ ಅವರು ಮೂವರ ಪರವಾಗಿ ಈ ವಿಷಯ ಪ್ರಕಟಿಸಿದರು. ಕಳೆದ ಎ.25ರಂದೇ ತಾವು ಪಕ್ಷದ ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಪತ್ರವನ್ನು ಕಳುಹಿಸಿದ್ದಾಗಿ ತಿಳಿಸಿದರು.
ಪಕ್ಷವು ಜಿಲ್ಲಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಸಮಿತಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿಯಾದ ತನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಯಲ್ಲಿ ಸವಾರ್ದಧಿಕಾರಿ ಧೋರಣೆ ತಳೆದಿರುವುದನ್ನು ಖಂಡಿಸಿ ತಾವು ಹಾಗೂ ಇತರ ಪದಾಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಹುದ್ದೆ ಹಾಗೂ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾಗಿ ಅವರು ತಿಳಿಸಿದರು.
ಅಭ್ಯರ್ಥಿಯ ಆಯ್ಕೆಯಲ್ಲಿ ಜಿಲ್ಲಾ ಸಮಿತಿಯನ್ನು ಹಾಗೂ ಪದಾಧಿಕಾರಿಗಳನ್ನು ರಾಜ್ಯ ನಾಯಕರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಾಲ್ಫಿ ವಿಕ್ಟರ್ ಲೂಯಿಸ್ ಹಾಗೂ ಕೀರ್ತಿರಾಜ್ ಪೂಜಾರಿ ಉಪಸ್ಥಿತರಿದ್ದರು.







