ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು : ರಮಾನಾಥ ರೈ ಆರೋಪ

ಬಂಟ್ವಾಳ : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು. ಆದರೆ, ಈಗ ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಬಂದರೆ ಮತ್ತೆ ಶಾಂತಿ ಕದಡುತ್ತದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದವರು ಯಾರು ಎಂಬುದು ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬಂಟ್ವಾಳ ಕಸಬಾದ ನೇರಂಬೋಳ್, ಕೊಂಗ್ರಬೆಟ್ಟು, ಕೆಳಗಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿರುವುದು ನಿಮಗೆ ತಿಳಿದಿದೆ. ನಾನು ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದೇನೆಯೇ ಹೊರತು, ದ್ವೇಷದ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ತಿಳಿಸಿದ ಅವರು ಬಂಟ್ವಾಳದಲ್ಲಿ ಮಿನಿ ವಿಧಾನ ಸೌಧ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ನಿರೀಕ್ಷಣ ಮಂದಿರ, ಉದ್ಯಾನವನ ಮುಂತಾದ ಹಲವು ಅಭಿವೃದ್ಧಿ ಕಾರ್ಯ ನನ್ನ ಅವಧಿಯಲ್ಲಾಗಿದೆ, ಬಂಟ್ವಾಳದಿಂದ ಪುಂಜಾಲಕಟ್ಟೆ ವರೆಗೆ ರಸ್ತೆ ಅಭಿವೃದ್ಧಿ ಆಗಿದೆ. ಇವೆಲ್ಲಾ ಕಾಮಗಾರಿಗಳನ್ನು ಬಿಜೆಪಿ ಶಾಸಕರ ಅವಧಿಗೆ ತುಲನೆ ಮಾಡಿದರೆ ಬಿಜೆಪಿ ಅಭಿವೃದ್ಧಿ ಶೂನ್ಯ, ನನ್ನ ಅಭಿವೃದ್ಧಿಗೆ ಸಾಕ್ಷಿಯಾಗಿ ವಾಮದಪದವು ಕಾಲೇಜು, ಅರೋಗ್ಯ ಕೇಂದ್ರ ನೋಡಬೇಕು. ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲೇ ಆಗಿದೆ ರೈ ತಿಳಿಸಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಮಾತನಾಡಿ ಬಡವರು ಇವತ್ತು ಕಣ್ಣೀರು ಹಾಕುತ್ತಿದ್ದಾರೆ. ಅವರೆಲ್ಲರ ಕಣ್ಣೀರು ಒರೆಸಲು ರಮಾನಾಥ ರೈ ಮತ್ತೊಮ್ಮೆ ಶಾಸಕರಾಗಿ ಗೆದ್ದು ಬರಬೇಕು, ಬಂಟ್ವಾಳದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಯಾವುದೇ ಸ್ವಲಾಭ ಇಲ್ಲದೆ ಜನ ಸೇವೆ ಮಾಡಿದ ಜನ ನಾಯಕ ನಿದ್ದರೆ ರಮಾನಾಥ ರೈಗಳು ಮಾತ್ರ. ಇದು ಅವರ ಕೊನೆಯ ಚುನಾವಣೆ ಯಾಗಿದ್ದು ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕೆಪಿಸಿಸಿ ಮುಖಂಡರುಗಳಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರುಗಳಾದ ಬಿ. ಎಚ್. ಖಾದರ್, ವಾಸು ಪೂಜಾರಿ, ಸದಾಶಿವ ಬಂಗೇರ, ಜನಾರ್ಧನ ಚೆಂಡ್ತಿಮಾರ್, ಚಂದ್ರಶೇಖರ್ ಪೂಜಾರಿ, ಬಿ.ಎಂ.ಅಬ್ಬಾಸ್ ಅಲಿ, ಪ್ರವೀಣ್ ಬಂಟ್ವಾಳ್, ಪ್ರವೀಣ್ ಜಕ್ರಿಬೆಟ್ಟು, ವಿಶ್ವನಾಥ ಗೌಡ ಮಣಿ, ರಿಯಾಜ್ ಬಂಟ್ವಾಳ, ಮಹಾಬಲ ಬಂಗೇರ, ಪರಮೇಶ್ವರ್ ಸಾಲ್ಯಾನ್, ರಾಜೇಶ್ ರೊಡ್ರಿಗಸ್, ಮನೋಹರ್, ಲಿಂಗಪ್ಪ ಕುಲಾಲ್, ನಿತಿನ್, ದಯಾನಂದ, ನಾರಾಯಣ ನೇರಂಬೋಳ್, ಗಣೇಶ್ ಪೂಜಾರಿ, ವೆಂಕಪ್ಪ ಮೂಲ್ಯ, ಶ್ರೀಧರ್ ಗೌಡ, ರಾಜೀವ್ ಸಾಲ್ಯಾನ್, ಮಹಾಬಲ ನೇರಂಬೋಳ್, ಗಂಗಯ್ಯ, ಉದಯ, ಚಂದ್ರ ಪ್ರಕಾಶ್, ರಿಯಾಜ್ ಹುಸೇನ್, ಬಶೀರ್ ಬಸ್ತಿಪಡ್ಪು, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.
ನನ್ನ ಹುಟ್ಟಿನ ಬಗ್ಗೆ ಪ್ರಶ್ನಿಸುತ್ತಾರೆ : ರೈ
ಬಿಜೆಪಿಗರು ನನ್ನ ಡಿಎನ್ ಎ ಬಗ್ಗೆ ಪ್ರಶ್ನಿಸುತ್ತಾರೆ. ಅಂದರೆ ನನ್ನ ತಂದೆಗೆ ನಾನು ಹುಟ್ಟಿರುವ ಕುರಿತು ಸಂಶಯದ ಮಾತುಗಳನ್ನು ಆಡುತ್ತಾರೆ. ಈ ಬಗ್ಗೆ ಕೇಳುವಾಗ ಮನಸಿಗೆ ತುಂಬಾ ಬೇಸರವಾಗುತ್ತದೆ ಎಂದು ರೈ ಭಾವುಕ ರಾದರು. ಕೊಂಗ್ರಬೆಟ್ಟುವಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರೈಗಳು ಭಾವುಕರಾಗುತ್ತಿದ್ದಂತೆ ಅಲ್ಲಿ ಸೇರಿದ್ದವರ ಕಣ್ಣುಗಳಲ್ಲಿ ಕಣ್ಣೀರು ಹರಿದು ಬರುತ್ತಿದ್ದುದು ಗಮನಕ್ಕೆ ಬಂತು.