ಅನುಮತಿ ಇಲ್ಲದೆ ಪ್ರಧಾನಿ ಮೋದಿ ರೋಡ್ ಶೋ: ದೂರು

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಪ್ರಕಾರ ಬಿಬಿಎಂಪಿ ವತಿಯಿಂದ ಅನುಮತಿ ಪಡೆಯದೆ, ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ನಡೆಸಿದ ರೋಡ್ ಶೋ ನಡೆಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್.ರಮೇಶ್, ಪಕ್ಷದ ವಕ್ತಾರ ರಮೇಶ್ ಬಾಬು ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಶನಿವಾರ ಈ ಸಂಬಂಧ ದೂರು ಸಲ್ಲಿಸಿದರು.
ಚುನಾವಣಾ ಆಯೋಗ ಭಾರತೀಯ ಜನತಾ ಪಕ್ಷದ ಅನುಮತಿ ಇಲ್ಲದ ಕಾನೂನು ಬಾಹಿರ ಕ್ರಮಗಳನ್ನು ನಿಯಂತ್ರಿಸಬೇಕು. ಬಿಬಿಎಂಪಿ ಅಧಿಕಾರಿಗಳು ಬಿಜೆಪಿ ಪರವಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಾಯ ಮಾಡದಂತೆ ನಿರ್ದೇಶನ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದರು.
ಮಾದರಿ ನಡಾವಳಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸರಕಾರಿ ಕಾರ್ಯಕ್ರಮವನ್ನು ಸರಕಾರಿ ವೆಚ್ಚದಲ್ಲಿ ನಡೆಸಲು ಅವಕಾಶವಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬಿಜೆಪಿ ರ್ಯಾಲಿ ನಡೆಸಿದ್ದು, ಸುಮಾರು ಮೂರು ಕೋಟಿ ರೂಪಾಯಿ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ.
ಇದಕ್ಕೆ ಬಿಬಿಎಂಪಿ ಹಾಗೂ ಇತರ ಸರಕಾರಿ ಸಂಸ್ಥೆಗಳ ಸೇವೆ ಬಳಸಿಕೊಳ್ಳಲಾಗಿದೆ. ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಾಮಗ್ರಿ ಬಳಸುವುದರ ಮೂಲಕ ಬಿಜೆಪಿ ಪಕ್ಷ ಬಿಬಿಎಂಪಿಗೆ ಅನುಮತಿ ಶುಲ್ಕವನ್ನು ಪಾವತಿ ಮಾಡದೇ ವಂಚಿಸಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.







