ಬಿಜೆಪಿ ಜನರನ್ನು ಭಾವನಾತ್ಮಕವಾಗಿ ವಿಭಜನೆ ಮಾಡಿದೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರೋಪ

ಮಂಗಳೂರು: ಬಿಜೆಪಿ ಸರಕಾರದ ಬಗ್ಗೆ ಜನರು ಬಹಳಷ್ಟು ನಿರೀಕ್ಷೆ, ನಂಬಿಕೆ ಇಟ್ಟುಕೊಂಡಿದ್ದರು. ಹಾಗೆಯೇ ಸಾಕಷ್ಟು ಅವಕಾಶ ನೀಡಿದ್ದರು. ಆದರೆ ಅಧಿಕಾರಕ್ಕೇರಿದ ಮೇಲೆ ಜನರನ್ನು ಭಾವಾತ್ಮಕವಾಗಿ ವಿಭಜನೆ ಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ನ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಚಾರ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು. ಬಿಜೆಪಿ ಧ್ರುವೀಕರಣ ರಾಜಕಾರಣದ ಮೂಲಕ ದೇಶವನ್ನು ಒಡೆಯುತ್ತಿದೆ, ಧರ್ಮ ಧರ್ಮದ ಜನರ ನಡುವೆ ಸಂಘರ್ಷವನ್ನುಂಟು ಮಾಡಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರನೇ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಜೆ.ಆರ್.ಲೋಬೊ ಕೆಎಎಸ್ ಅಧಿಕಾರಿಯಾಗಿ ತಮ್ಮ ಸಂಪರ್ಕವನ್ನು ಬಳಸಿಕೊಂಡು ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಜಲಸಿರಿ ಯೋಜನೆಯನ್ನು ತಂದವರು. ಆದರೆ ನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೊರೆತ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ಸಾರ್ವಜನಿಕರಿಗೆ ಮೂತ್ರ ವಿಸರ್ಜನೆಗೆ ಅಗತ್ಯದ ಒಂದು ಶೌಚಾಲಯವನ್ನು ಮಾಡಲಾಗಿಲ್ಲ ಎಂದರು.
ಮಂಗಳೂರು ನಗರವು ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದರೂ ಮತ್ತು ಶೈಕ್ಷಣಿಕ ಕೇಂದ್ರವಾಗಿ ದ್ದರೂ ಇಲ್ಲಿ ಯುವಕರಿಗೆ ಉದ್ಯೋಗದ ಸಮಸ್ಯೆ ಇದೆ ಎಂದರು.
ಬಿಜೆಪಿ ಕರ್ನಾಟಕದಲ್ಲಿ ಮೂರು ವರ್ಷ ಆಡಳಿತ ನಡೆಸಿದರೂ ಜನರು ನೆನಪಿನಲ್ಲಿಟ್ಟುಕೊಳ್ಳುವ ಯಾವುದೇ ಸಾಧನೆ ಬಿಜೆಪಿ ಸರಕಾರದಿಂದ ಆಗಿಲ್ಲ. ಭ್ರಷ್ಟಾಚಾರ ವಿಪರೀತವಾಗಿದೆ. ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾ ಗಿದೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡಿದೆ. ಕೊರೋನ ಕಾಲದಲ್ಲಿ ಸಮರ್ಪವಾಗಿ ಪರಿಸ್ಥಿತಿಯನ್ನು ನಿಭಾಯಿಸಲಿಲ್ಲ. ಕೋವಿಡ್ ಪ್ಯಾಕೆಜ್ ಯಾರಿಗೂ ತಲುಪಲಿಲ್ಲ. ಇದರ ಹಂಚುವಿಕೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಯುವಕರಿಗೆ ಉದ್ಯೋಗ ಸೃಷ್ಠಿಗೆ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ ಎಂದು ಅಪಾದಿಸಿದರು.
ಬಿಜೆಪಿಯವರು ಆಸ್ತಿ ತೆರಿಗೆ ಹೆಚ್ಚಿಸಿದ್ದು, ಜನರಿಗೆ ನೀಡಿದ ಶೇ.90ರಷ್ಟು ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಪದ್ಮರಾಜ್ ಟೀಕಿಸಿದರು. ಜಿಲ್ಲೆಯ ಜನತೆ ಶಾಂತಿ, ಸೌಹಾರ್ದಯುತ ಬದುಕನ್ನು ನಿರೀಕ್ಷಿಸುತ್ತಿದ್ದು, ಕಾಂಗ್ರೆಸ್ ಭ್ರಷ್ಟಾಚಾರರಹಿತ ಆಡಳಿತವನ್ನು ಮುಂದೆ ಕಾಂಗ್ರೆಸ್ ನೀಡಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸೇಸಮ್ಮ, ಪ್ರಕಾಶ್ ಸಾಲಿಯಾನ್, ಟಿ ಕೆ ಸುಧೀರ್, ಮತ್ತಿತರರು ಉಪಸ್ಥಿತರಿದ್ದರು.