ಸುರತ್ಕಲ್ ಮಾರುಕಟ್ಟೆ, ಸುರತ್ಕಲ್ ವೃತ್ತ ನಿರ್ಮಾಣದಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ: ರಾಘವೇಂದ್ರ ರಾವ್ ಆರೋಪ

ಸುರತ್ಕಲ್: ಸುರತ್ಕಲ್ ಉತ್ತರ ಶಾಸಕ ಭರತ್ ಶೆಟ್ಟಿ ಅವರು ಸುರತ್ಕಲ್ ಮಾರುಕಟ್ಟೆ ಮತ್ತು ಸದ್ಯ ನಿರ್ಮಾಣಗೊಳ್ಳುತ್ತಿರುವ ಸುರತ್ಕಲ್ ವೃತ್ತದಲ್ಲಿ ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ. ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವ ಕಾಂಗ್ರೆಸ್ ಶಾಸಕರಾಗಿದ್ದ ಸಂದರ್ಭ ಕಾಂಗ್ರೆಸ್ ಸರಕಾರ ನೀಡಿದ್ದ ಅನುದಾನದಿಂದ ಮಾಡಿದ ಕಾರ್ಯಗಳಿಗೆ ತನ್ನ ವೈಯಕ್ತಿಕ ಸಾಧನೆ ಎಂದು ಹೇಳಿಕೊಂಡು ಮತಯಾಚನೆ ಮಾಡುತ್ತಾ, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ನಿಲ್ಲಿಸಬೇಕೆಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಹೊಸಬೆಟ್ಟುವಿನ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ರಾವ್, ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಬಾವ ಅವಧಿಯಲ್ಲಿ ಎಷ್ಟು ನಡೆದಿತ್ತು ಇಂದಿಗೂ ಅದು ಅಷ್ಟಕ್ಕೇ ಸೀಮಿತವಾಗಿದೆ. ಆ ಬಳಿಕ ಬಂದ ಇಂದಿನ ಶಾಸಕ ಭರತ್ ಶೆಟ್ಟಿ ಅದರ ಕಾಮಗಾರಿಗಳನ್ನು ಮುಟ್ಟಿಯೂ ನೋಡಿಲ್ಲ. ಈ ಕಾಮಗಾರಿಯಲ್ಲಿ ಶಾಸಕರು ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ. ಸುರತ್ಕಲ್ ಜಂಕ್ಷನ್ ನಲ್ಲಿ 5 ಕೋಟಿ ರೂ. ವೃತ್ತ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಅವರ ನಕ್ಷೆಯಂತೆ ಲೆಕ್ಕಾಚಾರ ಹಾಕಿದರೂ ವೃತ್ತಕ್ಕೆ 5 ಕೋಟಿ ರೂ. ಬೇಕಾ ಎಂದು ಶಾಸಕ ಭರತ್ ಶೆಟ್ಟಿಯವರನ್ನು ಪ್ರಶ್ನೆ ಮಾಡಿರುವ ಅವರು, ವೃತ್ತ ನಿರ್ಮಾಣದ ಹೆಸರಿನಲ್ಲೂ ಭ್ರಷ್ಟಾಚಾರ ನಡೆಸಿರುವ ವಾಸನೆ ಬರುತ್ತಿದೆ ಎಂದರು.
ಮಳಲಿ ಮಸೀದಿ ನವೀಕರಣ ವೇಳೆ ಮಧ್ಯ ಪ್ರವೇಶಿಸಿ ಕಾಮಗಾರಿಗೆ ತಡೆ ತಂದು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದರು. ವೈದ್ಯನಾಗಿದ್ದುಕೊಂಡು ಮಾತೆತ್ತಿದರೆ, ಕೋಮು ಧ್ವೇಷ ಹರಡುವ ಭಾಷಣ ಮಾಡುತ್ತಾರೆ. ಇದರಿಂದ ಅವರು ಸಾಧಿಸಿದ್ದಾದರೂ ಏನು ಎಂದು ರಾಘವೇಂದ್ರ ರಾವ್ ಅವರು ಶಾಸಕರನ್ನು ಪ್ರಶ್ನಿಸಿದ್ದು, ಜನರಿಗೆ ಉತ್ತರ ನೀಡಬೇಕೆಂದು ಸವಾಲು ಹಾಕಿದ್ದಾರೆ.
ಹಿಂದೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಯಾಗಿದ್ದು ಇದನ್ನು ಬಿಜೆಪಿಯವರು ಅಂದಿನ ಶಾಸಕ ಈಗಿನ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವ ಅವರ ತಲೆಗೆ ಕಟ್ಟಿದ್ದರು. ಇದನ್ನು ಬಾವ ಮರೆತಿದ್ದಾರೆಯೇ?" ಎಂದು ಪ್ರಶ್ನಿಸಿದ ರಾಘವೇಂದ್ರ ರಾವ್, ಕಾಂಗ್ರೆಸ್ ಸರಕಾರದ ಅನುದಾನ ಬಳಸಿಕೊಂಡು ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಈಗ ನನ್ನದು ಎನ್ನುತ್ತಿರುವ ಮೊಯ್ದೀನ್ ಬಾವ ಅವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇರಳ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಚುನಾವಣಾ ಕೋ ಆಡಿನೇಟರ್ ಶಿಬಾ ರಾಮಚಂದ್ರ ಮಾತಾಡಿ, "ಇನಾಯತ್ ಅಲಿ ಅವರು ಸಮಾಜಮುಖಿ ಚಿಂತನೆ ಮತ್ತು ಕಾರ್ಯಗಳಿಂದ ಹೆಸರು ಪಡೆದವರು. ಮಂಗಳೂರು ಉತ್ತರ ಕ್ಷೇತ್ರಕ್ಕೆ ಓರ್ವ ಸಮರ್ಥ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪರಸ್ಪರ ವೈಮನಸ್ಸು ಮರೆತು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಕಲಾ ಪದ್ಮನಾಭ, ರಾಘವೇಂದ್ರ ರಾವ್, ರಾಜೇಶ್ ಪೂಜಾರಿ ಕುಳಾಯಿ, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕರ್ತರಿಗೆ ಮೋಸ ಮಾಡಿದ ಮೊಯ್ದಿನ್ ಬಾವ
ಟಿಕೆಟ್ ಹಂಚಿಕೆಗೂ ಮುನ್ನ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷ ಟಿಕೆಟ್ ನೀಡಿದವರ ಪರವಾಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದ ಮೊಯ್ದಿನ್ ಬಾವ ಸ್ವಾರ್ಥ ಸಾಧನೆಗಾಗಿ ಪಕ್ಷಾಂತರಗೊಂಡು ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಆರೋಪಿಸಿದ್ದಾರೆ.
ನಂತರ ಮಾತನಾಡಿದ ಅವರು, ಮೊಯ್ದಿನ್ ಬಾವ ಅವರು ಮಂಗಳೂರು ಉತ್ತರದ ಟಿಕೆಟ್ 10 ಮಂದಿ ಆಕಾಂಕ್ಷಿಗಳ ಪೈಕಿ ಒಬ್ಬರು. ಟಿಕೆಟ್ ಹಂಚಿಕೆಗೂ ಮುನ್ನ ಪಕ್ಷದ ಹೈಕಮಾಂಡ್ 10 ಮಂದಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ನೀಡದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿದ್ದರು. ಆದರೆ ಈಗ 20ವರ್ಷಗಳಿಂದ ಇದ್ದ ಮತ್ತು ಶಾಸಕನಾಗಿ ಮಾಡಿದ್ದ ಕಾಂಗ್ರೆಸ್ ಮತ್ತು ಅದರ ಅಭ್ಯರ್ಥಿ ವಿರುದ್ಧ ಮಾತಾಡುತ್ತಿದ್ದಾರೆ. ಕಾಂಗ್ರೆಸ್ನ ಟಿಕೆಟ್ ತಂದಿದ್ದೇನೆ ಎಂದು ಜನರನ್ನು ವಿಮಾನ ನಿಲ್ದಾಣಕ್ಕೆ ಕರೆಸಿದ್ದ ಬಾವ ಅಂದೇ ಜೆಡಿಎಸ್ನ ಬಿ ಪಾರ್ಮ್ ತಂದಿದ್ದರು. ಅದನ್ನು ಮರೆ ಮಾಚಿ ಕಾಂಗ್ರೆಸ್ ಅನ್ಯಾಯ ಮಾಡಿದೆ ಎನ್ನುತ್ತಾ ನಿಷ್ಟಾವಂತ ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಬಾವ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಓರ್ವ ಉದ್ಯಮಿಯಾಗಿ ಸಮಾಜಸೇವೆಯಲ್ಲಿ ಅವಿರತವಾಗಿ ತೊಡಗಿಕೊಂಡಿರುವ ಇನಾಯತ್ ಅಲಿ ಓರ್ವ ಸಜ್ಜನ, ಪ್ರಾಮಾಣಿಕ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಪ್ರಚಾರಕ್ಕೆ ಹೋದಾಗ ಜನರು ಮುಗಿಬಿದ್ದು ಅವರನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ಸದಾಶಿವ ಶೆಟ್ಟಿ ಹೇಳಿದರು.
ಮೊಯ್ದಿನ್ ಬಾವಗೆ 2 ಸಾವಿರ ಮತಗಳಷ್ಟೇ ಪಡೆಯಲು ಸಾಧ್ಯ: ದಂಡಕೇರಿ ಭವಿಷ್ಯ
ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕೆಪಿಸಿಸಿ ನೀಡಿರುವ 5 ಗ್ಯಾರಂಟಿಗಳಿಗೆ ಜನರಿಗೆ ಬೆಂಬಲ ಸೂಚಿಸುತ್ತಿದ್ದು ಇನಾಯತ್ ಅಲಿ ಅವರಂತಹ ಯೋಗ್ಯ ಅಭ್ಯರ್ಥಿ ಯನ್ನು ಗೆಲ್ಲಿಸುವುದೇ ನಮ್ಮ ಗುರಿ. ಮೊಯ್ದಿನ್ ಬಾವ ಅವರು ಹೆಚ್ಚೆಂದರೆ ಒಟ್ಟು 2 ಸಾವಿರ ಮತಗಳನ್ನು ಪಡೆಯಬಹುದು. ಇಲ್ಲಿ ಜೆಡಿಎಸ್ನ ಮತ ಬ್ಯಾಂಕ್ ಇಲ್ಲ. ಅವರ ವೈಯಕ್ತಿಕ ವರ್ಚಸ್ಸಿನ ನೆಲೆಯಲ್ಲಿ 2 ಸಾವಿರ ಮತಗಳಷ್ಟೆ ಪಡೆಯಬಹುದು. ಆದರೆ, ಮುಂದಿನ ದಿನಗಳಲ್ಲಿ ಅವರೊಂದಿಗೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿರುವ ಹಿಂದಿನ ಕಾಂಗ್ರೆಸ್ ಕಾರ್ಯಕರ್ತರೂ ಇನಾಯತ್ ಅಲಿಗೆ ಮತ ಚಲಾಯಿಸಲಿದ್ದಾರೆ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ ತಿಳಿಸಿದರು.