ಧರಣಿ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಚಂದ್ರಶೇಖರ ಆಝಾದ್, ವಾಧ್ರಾ
ಹೊಸದಿಲ್ಲಿ,ಎ.30: ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರತದ ಖ್ಯಾತ ಕುಸ್ತಿಪಟುಗಳು ಹೊಸದಿಲ್ಲಿಯ ಜಂತರ್ಮಂತರ್ ನಲ್ಲಿ ನಡೆಸುತ್ತಿರುವ ಧರಣಿಯು ರವಿವಾರ ಎಂಟನೇ ದಿನಕ್ಕೆ ಕಾಲಿರಿಸಿದ್ದು, ರಾಜಕಾರಣಿಗಳು , ಗಣ್ಯರು ಹಾಗೂ ಕ್ರೀಡಾಪಟುಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಭೀಮ್ ಆರ್ಮಿ ಪಕ್ಷದ ವರಿಷ್ಠ ಚಂದ್ರಶೇಖರ ಆಝಾದ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಧ್ರಾ ಪತಿ ರಾಬರ್ಟ್ ವಾಧ್ರಾ ಅವರು ಇಂದು ಜಂತರ್ಮಂತರ್ಗೆ ಆಗಮಿಸಿ ಧರಣಿ ನಿರತ ಕುಸ್ತಿಪಟುಗಳನ್ನು ಭೇಟಿಯಾದರು.
ಆ ಬಳಿಕ ಸ್ಥಳದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ‘‘ ಒಂದು ವೇಳೆ ಯಾರೋ ಒಬ್ಬರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ ಲಕ್ಷಾಂತರ ಜನರು ಬೆಂಬಲಕ್ಕಾಗಿ ಧಾವಿಸುತ್ತಾರೆ. ಇದು ಪ್ರಾಂತ್ಯ, ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ‘‘ನಾವೆಲ್ಲರೂ ಅವರೊಂದಿಗಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನಾವು ಒದಗಿಸಲಿದ್ದೇವೆ’’ ಎಂದು ವಾದ್ರಾ ಹೇಳಿದರು.
ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ಕೂಡಾ ಜಂತರ್ಮಂತರ್ಗೆ ಭೇಟಿ, ಪ್ರತಿಭಟನಕಾರರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರು ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ನ ಬ್ರಿಜ್ಶರಣ್ಸಿಂಗ್ ವಿರುದ್ಧ ಒಲಿಂಪಿಕ್ ಪದಕ ವಿಜೇತ ಬಜರಂಗ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಮತ್ತು ಅವಳಿ ವಿಶ್ವ ಚಾಂಪಿಯನ್ಶಿಪ್ ಪದಕ ಪುರಸ್ಕೃತರಾದ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್ಶರಣ್ಸಿಂಗ್ ವಿರುದ್ಧ ಭಾರತದ ಪ್ರಮುಖ ಒಲಿಂಪಿಕ್ ಪುರಸ್ಕೃತರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದ ಒಂದು ವಾರದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಪ್ರಿಲ್ 28ರಂದು ಎಫ್ಐಆರ್ದಾಖಲಿಸಿದ್ದರು. ಎರಡು ಎಫ್ಐಆರ್ಗಳನ್ನು ದಾಖಲಿಸಿದ ಬಳಿಕವೂ ಕುಸ.್ತಪಟುಗಳು ಪ್ರತಿಭಟನೆಯನ್ನು ಕೈಬಿಡಲು ನಿರಾಕರಿಸಿದ್ದಾರೆ. ಸಂತ್ರಸ್ತ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ದೊರೆಯುವ ತನಕ ತಮ್ಮ ಹೋರಾಟ ಮುಂದುವರಿಯಲಿದೆಯೆಂದು ಅವರು ಘೋಷಿಸಿದ್ದಾರೆ.
ನೂತನ ಬೆಳವಣಿಗೆಯ ಯೊಂದರಲ್ಲಿ ಓರ್ವ ಅಪ್ರಾಪ್ತ ಬಾಲಕಿ ಸೇರಿದಂತೆ ಬ್ರಿಜ್ಶರಣ್ಸಿಂಗ್ ವಿರುದ್ಧ ದೂರು ನೀಡಿರುವ ಎಲ್ಲಾ ಏಳು ಮಂದಿ ಮಹಿಳೆಯರಿಗೆ ಭದ್ರತೆಯನ್ನು ಒಗಿಸಲಾಗಿದೆ ಹಾಗೂ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.