ಸುಡಾನ್ ಛಿದ್ರಗೊಳ್ಳುತ್ತಿದೆ: ವಿಶ್ವಸಂಸ್ಥೆ ಕಳವಳ

ಖಾರ್ಟಮ್, ಎ.30: ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಭದ್ರತಾ ಪಡೆಗಳೇ ಪರಸ್ಪರ ದಾಳಿ ನಡೆಸುತ್ತಿರುವ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಿರುವ ಸುಡಾನ್ ದೇಶ ಛಿದ್ರಗೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶವು ಛಿದ್ರಗೊಳ್ಳುತ್ತಿರುವಾಗ ಅಧಿಕಾರಕ್ಕಾಗಿ ಹೋರಾಡುವುದಕ್ಕೆ ಯಾವುದೇ ಅಧಿಕಾರವಿಲ್ಲ. ಸಂಘರ್ಷದಿಂದ ಜರ್ಝರಿತಗೊಂಡಿರುವ ಸುಡಾನ್ನಲ್ಲಿ ಆಫ್ರಿಕನ್ ಯೂನಿಯನ್ ನೇತೃತ್ವದಲ್ಲಿ ನಡೆಯುವ ಸಂಧಾನ ಮಾತುಕತೆಯನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಗುಟೆರಸ್ ಹೇಳಿದ್ದಾರೆ.
ಅಮೆರಿಕ, ಸೌದಿ ಅರೆಬಿಯಾ, ಆಫ್ರಿಕನ್ ಯೂನಿಯನ್ ಹಾಗೂ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆದ ಸಂಧಾನ ಮಾತುಕತೆಯ ಬಳಿಕ ಸುಡಾನ್ ನಲ್ಲಿ ಕದನ ವಿರಾಮ ವಿಸ್ತರಣೆಗೆ ಸೇನೆ ಹಾಗೂ ಅರೆಸೇನಾ ಪಡೆ ಸಮ್ಮತಿ ಸಿದೆ.
ಸುಡಾನ್ ನ ವೆಸ್ಟ್ಡಾರ್ಫರ್ ರಾಜ್ಯದಲ್ಲಿ ಪರಿಸ್ಥಿತಿ ಭಯಾನಕವಾಗಿದ್ದು ಜೆನಿನಾ ನಗರದಲ್ಲಿ ಈ ವಾರ ಕನಿಷ್ಟ 96 ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ಸಮಾಜವು ಕುಸಿಯುತ್ತಿದೆ.
ಬುಡಕಟ್ಟು ಸಮುದಾಯದವರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಇದೀಗ ಆಫ್ರಿಕನ್ ಯೂನಿಯನ್ ನೇತೃತ್ವದಲ್ಲಿ ನಡೆಯುವ ಶಾಂತಿ ಪ್ರಕ್ರಿಯೆಗೆ ಎಲ್ಲರ ಬೆಂಬಲದ ಅಗತ್ಯವಿದೆ ಎಂದು ಗುಟೆರಸ್ ಹೇಳಿದ್ದಾರೆ.
ಈ ಮಧ್ಯೆ, ಸುಡಾನ್ನ ಸೇನಾಪಡೆ ಮತ್ತು ಅರೆಸೇನಾ ಪಡೆ ಮುಖ್ಯಸ್ಥರು ಪರಸ್ಪರರ ವಿರುದ್ಧ ದೋಷಾರೋಪಣೆ ಮಾಡುತ್ತಿದ್ದಾರೆ. ದೇಶದಲ್ಲಿನ ಬಿಕ್ಕಟ್ಟಿಗೆ ಅರೆಸೇನಾ ಪಡೆ ಕಾರಣವಾಗಿದೆ. ಈ ಸಶಸ್ತ್ರ ಹೋರಾಟಗಾರರ ಪಡೆಯು ಸುಡಾನ್ ದೇಶವನ್ನು ನಾಶಗೊಳಿಸುವ ಉದ್ದೇಶ ಹೊಂದಿದೆ ಎಂದು ಸೇನಾಪಡೆ ಮುಖ್ಯಸ್ಥ ಅಬ್ದಲ್ ಫತಾಹ್ ಅಲ್-ಬರ್ಹಾನ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅರೆಸೇನಾ ಪಡೆ ಮುಖ್ಯಸ್ಥ ಹಮ್ದನ್ ಡಾಗ್ಲೊ, ಸೇನಾಪಡೆ ಮುಖ್ಯಸ್ಥ ಬರ್ಹಾನ್ ಓರ್ವ ದೇಶದ್ರೋಹಿ ಎಂದು ಟೀಕಿಸಿದ್ದಾರೆ.
ಸುಡಾನ್ ನ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಟ 528 ಮಂದಿ ಮೃತಪಟ್ಟಿದ್ದು 4,599 ಮಂದಿ ಗಾಯಗೊಂಡಿದ್ದಾರೆ ಎಂದು ಸುಡಾನ್ ನ ಆರೋಗ್ಯ ಇಲಾಖೆಯ ವರದಿ ಹೇಳಿದೆ. ಆದರೆ ಈ ಅಂಕಿಅಂಶ ಸಂಪೂರ್ಣವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಂಘರ್ಷ ತೀವ್ರಗೊಂಡಿರುವ ರಾಜಧಾನಿ ಖಾರ್ಟಮ್ , ಬ್ಲೂನೈಲ್, ನಾರ್ಥ್ ಕೊರ್ಡೊಫಾನ್ ರಾಜ್ಯಗಳಿಂದ ಸುಮಾರು 75,000 ಜನತೆ ಗುಳೇ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ಹೇಳಿವೆ.
ಈಗಾಗಲೇ 15 ದಶಲಕ್ಷ ಜನತೆ (ಜನಸಂಖ್ಯೆಯ 75%ದಷ್ಟು) ಆಹಾರದ ಕೊರತೆ ಎದುರಿಸುತ್ತಿರುವ ಸುಡಾನ್ ನಲ್ಲಿ ಭುಗಿಲೆದ್ದಿರುವ ಸಂಘರ್ಷವು ಇನ್ನಷ್ಟು ಜನರನ್ನು ಹಸಿವಿನ ಸಮಸ್ಯೆಗೆ ದೂಡಲಿದೆ ಎಂದು ವಿಶ್ವ ಆಹಾರ ಯೋಜನೆ ಮಾಹಿತಿ ನೀಡಿದೆ. ಸಂಘರ್ಷ ತೀವ್ರಗೊಂಡಿರುವ ಸ್ಥಳದ ಸಮೀಪವಿರುವ ಹಲವು ಆಸ್ಪತ್ರೆಗಳು ಹಾನಿಗೀಡಾಗಿದ್ದು ಸುಮಾರು 70%ದಷ್ಟು ಆಸ್ಪತ್ರೆಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಎಂದು ಸುಡಾನ್ನ ಡಾಕ್ಟರ್ಸ್ ಯೂನಿಯನ್ ಹೇಳಿದೆ.
ವೆಸ್ಟ್ ದಾರ್ಫುರ್ ರಾಜ್ಯದಲ್ಲಿ ವ್ಯಾಪಕ ಲೂಟಿ, ನಾಶ ಮತ್ತು ಆಸ್ತಿಯನ್ನು ಸುಡುವ ವಿದ್ಯಮಾನ ನಡೆಯುತ್ತಿರುವುದರಿಂದ ಮಾನವೀಯ ನೆರವು ಕಾರ್ಯ ಸ್ಥಗಿತಗೊಂಡಿದೆ ಎಂದು `ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್'ನ ಉಪ ಕಾರ್ಯಾಚರಣಾ ವ್ಯವಸ್ಥಾಪಕ ಸಿಲ್ವಿಯನ್ ಪೆರಾನ್ ಹೇಳಿದ್ದಾರೆ.