ಛತ್ತೀಸಗಢ: ಪ್ರಾರ್ಥನೆಗೆ ಸೇರಿದ್ದ ಕ್ರೈಸ್ತರ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು; ಆರೋಪ
ಹೊಸದಿಲ್ಲಿ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಜನರನ್ನು ಬಲವಂತಪಡಿಸುತ್ತಿದ್ದಾರೆಂದು ಆರೋಪಿಸಿ ರವಿವಾರದ ಪ್ರಾರ್ಥನೆಗೆ ಎಪ್ರಿಲ್ 30ರಂದು ಛತ್ತೀಸಗಢದ ಪಟಾನ್ ಎಂಬಲ್ಲಿನ ಮನೆಯೊಂದರಲ್ಲಿ ಸೇರಿದ್ದ ಕ್ರೈಸ್ತ ಸಮುದಾಯದ ಮಂದಿಯ ಮೇಲೆ ಬಜರಂಗದಳಕ್ಕೆ ಸೇರಿದವರೆನ್ನಲಾದ ಹಲವರು ದಾಳಿ ನಡೆಸಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡಿದ ಘಟನೆ ನಡೆದಿದ್ದು ಈ ಸಂದರ್ಭ ದಾಳಿಕೋರರು ಜೈ ಶ್ರೀ ರಾಮ್ ಘೋಷಣೆ ಮೊಳಗಿಸುತ್ತಿದ್ದರು ಎಂದು thewire.in ವರದಿ ಮಾಡಿದೆ.
ಪಟಾನ್ ನಗರವು ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕ್ಷೇತ್ರವಾಗಿದೆ. ಘಟನೆ ರವಿವಾರ ಅಪರಾಹ್ನ ನಡೆದಿದ್ದು ಈ ಸಂದರ್ಭ ಭಯಭೀತರಾಗಿ ಮನೆಯ ಕೊಠಡಿಯೊಂದರೊಳಗೆ ಸೇರಿಕೊಂಡ ಹಲವರು ಈ ಘಟನೆಯ ವೀಡಿಯೋ ಚಿತ್ರೀಕರಿಸಿದ್ದಾರೆ.
ಅಪರಾಹ್ನ ಸುಮಾರು 12.30ಕ್ಕೆ ಸುಮಾರು 30-35 ಮಂದಿಯಿದ್ದ ತಂಡ ಕೈಗಳಲ್ಲಿ ಲಾಠಿಗಳನ್ನು ಹಿಡಿದುಕೊಂಡು ಬಾಗಿಲನ್ನು ಗುದ್ದಲು ಆರಂಭಿಸಿತ್ತು. ಬಾಗಿಲು ತೆರೆಯಲು ನಿರಾಕರಿಸಿದಾಗ ನಿಂದಿಸಲಾರಂಭಿಸಿದ್ದರಲ್ಲದೆ ಜೈ ಶ್ರೀ ರಾಮ್ ಘೋಷಣೆ ಮೊಳಗಿಸಲು ಆರಂಭಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಧಾಗಿ thewire.in ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳುವ ಬದಲು ಮನೆಯಲ್ಲಿದ್ದ ಸುಮಾರು 10 ರಿಂದ 12 ಮಂದಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಠಾಣೆಯಲ್ಲಿ ಪ್ರಶ್ನಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಕುರಿತಂತೆ ಮಾಧ್ಯಮವೊಂದು ಸ್ಥಳೀಯ ಎಸ್ಪಿ ಅಭಿಷೇಕ್ ಪಲ್ಲವ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಘಟನೆ ಬಗ್ಗೆ ಕೇಳಿದಾಕ್ಷಣ ಅವರು ಕರೆ ಕಟ್ ಮಾಡಿದ್ದಾರೆಂದು ವರದಿಯಾಗಿದೆ.