ನಿಮ್ಮ ಕುಟುಂಬದ ಸ್ಥಿತಿ, ಬೆಲೆ ಏರಿಕೆ ನೋಡಿ ಮತ ಹಾಕಿ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಬೆಂಗಳೂರು, ಮೇ.1:ಕರ್ನಾಟಕ ರಾಜ್ಯದ ಮತದಾರರು ಮತದಾನ ಮಾಡಲು ಹೋದಾಗ ನಿಮ್ಮ ಕುಟುಂಬದ ಸ್ಥಿತಿ, ಬೆಲೆ ಏರಿಕೆ, ದುಬಾರಿ ಆರೋಗ್ಯ ಸೇವೆ ಬಗ್ಗೆ ಆಲೋಚಿಸಿ ಮತ ಹಾಕಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಪ್ರತಿಯೊಂದು ಮತವು ಬೆಲೆ ಏರಿಕೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದಂತಾಗಲಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಆರು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ತಾನು ಚುನಾವಣೆಗೂ ಮುನ್ನ ನೀಡುವ ಭರವಸೆಗಳನ್ನು ಈಡೇರಿಸುವ ಪಕ್ಷ ಎಂದರೆ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದ ಈ ಯೋಜನೆಗಳು ಬಿಜೆಪಿಯ ನಿದ್ದೆಗೆಡಿಸಿದೆ ಎಂದರು.
ಅಲ್ಲದೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ತೋರಿಸಿದೆ. ಸುಳ್ಳಿನ ಪಕ್ಷವಾಗಿರುವ ಬಿಜೆಪಿಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ನೋಡಿ ಸಹಿಸಲಾಗುತ್ತಿಲ್ಲ. ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಗಂಗಾ ನದಿ ಶುಚಿ, ಬುಲೆಟ್ ರೈಲು ಆರಂಭ, ಎಲ್ಲರ ಖಾತೆಗೆ 15 ಲಕ್ಷ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಸುಳ್ಳನ್ನು ಹೇಳಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರ ಎಲ್ಲಾ ಭರವಸೆಗಳು ಕೇವಲ ಗಿಮಿಕ್ ಆಗಿದ್ದವು ಎಂದು ಹೇಳಿದರು.
ಬಿಜೆಪಿಯ ಈ ಸುಳ್ಳಿನ ಭರವಸೆಗಳಿಂದ ಬೇಸತ್ತಿರುವ ಜನರು ಈಗ ಜಾಗೃತರಾಗಿದ್ದಾರೆ. ರಾಜಸ್ಥಾನದ ಬಿಕನೇರ್ ನಿಂದ ಬೆಂಗಳೂರಿನವರೆಗೆ, ಉದಯಪುರದಿಂದ ಉಡುಪಿವರೆಗೆ ಬಿಜೆಪಿಯ ಸುಳ್ಳಿನ ಭರವಸೆಗಳಿಂದ ಹತಾಶರಾಗಿದ್ದಾರೆ. ಈಗ ಕರ್ನಾಟಕ ರಾಜ್ಯದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪ್ರಗತಿ ಬೇಕಾಗಿದೆಯೇ ಹೊರತು ಬಿಜೆಪಿಯ ದ್ರೋಹವಲ್ಲ ಎಂದು ಅವರು ತಿಳಿಸಿದರು.
ಐದು ವರ್ಷಗಳ ಆಡಳಿತ ಮಾಡಿರುವ ಬಿಜೆಪಿ ಸರ್ಕಾರ ಹಳೇ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ತಿಳಿಯಲು ರಾಜಸಥಾನದ ಕರೆ ತಿರುಗಿ ನೋಡುತ್ತಾರೆ. ಸಾಮಾಜಿಕ ಭದ್ರತೆ ಮತ್ತು ಮಹಿಳೆಯರ ಸಬಲೀಕರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ದೂರದೃಷ್ಠಿಯಾಗಿದೆ.
ಇಂದಿರಾ ಗಾಂಧಿ ಗ್ಯಾಸ್ ಸಿಲಿಂಡರ್ ಯೋಜನೆ ಮೂಲಕ 500 ರೂ.ಗೆ ಸಿಲಿಂಡರ್ ನೀಡಿದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಹೊರೆ ಇಳಿಸಲು ಪ್ರತಿ ತಿಂಗಳು ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಿದೆ.
ರಾಜಸ್ಥಾನದಲ್ಲಿ 100 ಯುನಿಟ್ ಮನೆಬಳಕೆಗೆ ಹಾಗೂ 2 ಸಾವಿರ ಯುನಿಟ್ ಕೃಷಿ ಉದ್ದೇಶಕ್ಕೆ ಉಚಿತವಾಗಿ ನೀಡಲಾಗಿದ್ದು, ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಪ್ರತಿ ತಿಂಗಳು ನೀಡಲಾಗುವುದು.
ರಾಜಸ್ಥಾನದಲ್ಲಿ 1 ಕೋಟಿ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಉದ್ದೇಶದಿಂದ ಪಿಂಚಣಿ ನೀಡುತ್ತಿದ್ದು, ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾಸಿಕ ಪಿಂಚಣಿಯನ್ನು ಅಗತ್ಯ ಫಲಾನುಭವಿಗಳಿಗೆ ನೀಡಲಿದೆ ಎಂದು ವಿವರಿಸಿದರು.







