ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ - ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮಂಗಳೂರು : ಕಲೆಯಿಂದಾಗಿ ಕಲಾವಿದನಿಗೆ ಬದುಕು. ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪರಾರಿ ಗುತ್ತು ಮನೆವಠಾರದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಂಕರ ಶೆಟ್ಟಿ ಮುಂಡಡ್ಕ ಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭ ಉಪಸ್ಥಿತರಿದ್ದರು.
ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ. ಶಂಕರ ಶೆಟ್ಟಿ ಗುಂಡಿಲಗುತ್ತು ಅವರು ದಿ. ಬಾಲಕೃಷ್ಣ ಶೆಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ಕೊಳಕೆ ದೇವಳದ ಪ್ರಧಾನ ಅರ್ಚಕ ಮಹಾಬಲೇಶ್ವರ ಮಯ್ಯ ಮತ್ತು ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಪಂಜಾಜೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬಯಲಾಟದ ಸೇವಾಕರ್ತ ದಿವಾಕರ ಶೆಟ್ಟಿ ಪರಾರಿ ಗುತ್ತು ಸ್ವಾಗತಿಸಿದರು. ಶಂಕರ್ ಶೆಟ್ಟಿ ಪರಾರಿಗುತ್ತು ವಂದಿಸಿದರು. ಪಿ. ಕಿಶೋರ್ ಭಂಡಾರಿ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.