ಬಂದರು ಶ್ರಮಿಕರ ಸಂಘದಲ್ಲಿ ಕಾರ್ಮಿಕರ ದಿನಾಚರಣೆ

ಮಂಗಳೂರು: ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ನಗರದ ಹಮಾಲಿ ಕಾರ್ಮಿಕರು ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆಯ ಬಳಿ ಇಂದು ಕೆಂಬಾವುಟ ಹಾರಿಸಿ, ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಿ ಕಾರ್ಮಿಕರ ದಿನ ಆಚರಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್ 8 ಗಂಟೆಯ ಕೆಲಸ, 8 ಗಂಟೆಯ ವಿಶ್ರಾಂತಿ ಮತ್ತು ಮನರಂಜನೆ, 8 ಗಂಟೆಯ ನಿದ್ದೆಗಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಕಾರ್ಮಿಕರ ಐತಿಹಾಸಿಕ ಹೋರಾಟದಲ್ಲಿ ಹುತಾತ್ಮರಾದ ಕಾರ್ಮಿಕ ಸಂಗಾತಿಗಳ ಬಲಿದಾನದಿಂದಾಗಿ ಜಗತ್ತಿನ ಕಾರ್ಮಿಕರಿಗೆ ಮುಕ್ತಿ ಸಿಕ್ಕಿತ್ತು. ಆದರೆ ರಾಜ್ಯದ ಬಿಜೆಪಿ ಸರಕಾರ ಕೆಲಸದ ಅವಧಿಯನ್ನು 12ಗಂಟೆಗೆ ಏರಿಕೆ ಕಾರ್ಮಿಕರಿಗೆ ದ್ರೋಹ ಮಾಡಿದೆ. ಕೇಂದ್ರದ ಮೋದಿ ಸರಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಹುನ್ನಾರದ ವಿರುದ್ಧ ಕಾರ್ಮಿಕ ವರ್ಗವು ಐಕ್ಯತೆಯಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದುಕ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್ ಧ್ವಜಾರೋಹಣ ಮಾಡಿದರು.
ಬಂದರು ಶ್ರಮಿಕರ ಸಂಘದ ಮುಖಂಡರಾದ ಹರೀಶ್ ಕೆರೆಬೈಲ್, ಶಿವಾನಂದ ಪೆರುಮಾಲ್, ಮುಹಮ್ಮದ್ ಮೋನು, ಸಿದ್ದೀಕ್ ಬೆಂಗರೆ, ಫಾರೂಕ್ ಉಳ್ಳಾಲ, ಮಜೀದ್ ಉಲ್ಲಾಲಬೈಲ್, ಡಿವೈಎಫ್ಐ ಮುಖಂಡರಾದ ತಯ್ಯೂಬ್ ಬೆಂಗರೆ, ಹನೀಫ್, ಝುಬೈರ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.