ಪಂಚಾಯತ್ ಶಿಫಾರಸು ಮಾಡಿದರೆ ಶಿರ್ವ ಪಟ್ಟಣ ಪಂಚಾಯತ್: ಸೊರಕೆ

ಶಿರ್ವ, ಮೇ 1: ಪಂಚಾಯತ್ ಶಿಫಾರಸು ಮಾಡಿದರೆ ಮುಂದಿನ ದಿನಗಳಲ್ಲಿ ಶಿರ್ವವನ್ನು ಪಟ್ಟಣ ಪಂಚಾಯತ್ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಶಿರ್ವದಲ್ಲಿ ಇಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಪು ಕ್ಷೇತ್ರಕ್ಕೆ ಶಿರ್ವ ಕೇಂದ್ರ ಸ್ಥಳ. ಶಿರ್ವ ಪಟ್ಟಣ ಪಂಚಾಯತ್ ಮಾಡುವಷ್ಟು ಎಲ್ಲಾ ಅರ್ಹತೆವನ್ನು, ಅವಕಾಶವನ್ನು ಹೊಂದಿದೆ. ಪಂಚಾಯತ್ ಶಿಫಾರಸು ಮಾಡಿದರೆ ಶಿರ್ವಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವವನ್ನು ಮಾಡಲು ಸಾಧ್ಯವಿದೆ ಎಂದರು.
ತಾಲೂಕು ಕಚೇರಿಗಳಲ್ಲಿ ಬ್ರೋಕರ್ಗಳೇ ತುಂಬಿಹೋಗಿ ಜನರ ಕೆಲಸಗಳು ಆಗುತ್ತಿಲ್ಲ. ಎಲ್ಲದಕ್ಕೂ ಕಡಿವಾಣ ಹಾಕುವ ಕೆಲಸ ಆಗಬೇಕಾಗಿದೆ. ಜನರ ಕೆಲಸಕ್ಕೆ ಆದ್ಯತೆ ಸಿಗಬೇಕಾಗಿದೆ. ಈ ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ ವರ್ಗದ ಶ್ರಮ ಬಹಳಷ್ಟು ಇದೆ. ಆ ಕಾರ್ಮಿಕರನ್ನು ತುಳಿಯುವ ಕೆಲಸವನ್ನು ಆಡಳಿತರೂಢ ಸರಕಾರ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಾಂಗ್ರೆಸ್ ಸರಕಾರ ಬಂದರೆ ಬಡವರಿಗೆ ಜನ ಸಾಮಾನ್ಯರಿಗೆ ಸಹಾಯ ಆಗುತ್ತದೆ. ಸೊರಕೆ ಪ್ರತೀ ಪಂಚಾಯತ್ ಮಟ್ಟಕ್ಕೆ ಬಂದು ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿ ಸುವ ಕೆಲಸ ಮಾಡಿದ್ದಾರೆ. ಶಿರ್ವ ಗ್ರಾಮ ಕಾಂಗ್ರೆಸ್ನ ಭದ್ರಕೋಟೆ. ಶಿರ್ವ ಗ್ರಾಮದಲ್ಲಿ ಕಾಂಗ್ರೆಸನ ಒಂದು ಓಟು ಈ ಬಾರಿ ಮಿಸ್ ಆಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೊಜ, ರತನ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ದಿನೇಶ್ ಕೋಟ್ಯಾನ್, ಜಿತೇಂದ್ರ ಪುಟಾರ್ಡೊ, ಪ್ರಕಾಶ್, ಗೀತಾ ವಾಗ್ಲೆ, ಪ್ರಭಾ ಶೆಟ್ಟಿ, ಪ್ರಶಾಂತ್ ಜತ್ತನ್, ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು.







