ಸುಡಾನ್ ಬಿಕ್ಕಟ್ಟು: ಜಿದ್ದಾದಿಂದ ಅಹ್ಮದಾಬಾದ್ ತಲುಪಿದ 231 ಭಾರತೀಯರು
ಅಹ್ಮದಾಬಾದ್,ಮೇ 2: ಕೇಂದ್ರದ ‘ಆಪರೇಷನ್ ಕಾವೇರಿ’ಯಡಿ ಸಂಘರ್ಷ ಪೀಡಿತ ಸುಡಾನ್ನಿಂದ ತೆರವುಗೊಳಿಸಲ್ಪಟ್ಟಿದ್ದ 231 ಭಾರತೀಯರು ಮಂಗಳವಾರ ಅಹ್ಮದಾಬಾದ್ ಗೆ ಆಗಮಿಸಿದರು. ಇವರಲ್ಲಿ 208 ಜನರು ಗುಜರಾತಿಗೆ, 13 ಜನರು ಪಂಜಾಬಿಗೆ ಮತ್ತು 10 ಜನರು ರಾಜಸ್ಥಾನಕ್ಕೆ ಸೇರಿದವರಾಗಿದ್ದಾರೆ.
ಸೌದಿ ಅರೇಬಿಯದ ಜಿದ್ದಾದಿಂದ ವಿಶೇಷ ವಿಮಾನದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ ಭಾರತೀಯರನ್ನು ಗುಜರಾತ ಸರಕಾರದ ಅನಿವಾಸಿ ಗುಜರಾತಿ ವಿಭಾಗವನ್ನು ನಿರ್ವಹಿಸುತ್ತಿರುವ ಸಹಾಯಕ ಗೃಹ ಸಚಿವ ಹರ್ಷ ಸಾಂಘ್ವಿಯವರು ಸ್ವಾಗತಿಸಿದರು.
ಆಪರೇಷನ್ ಕಾವೇರಿ’ಯಡಿ ಭಾರತವು ಖರ್ತೂಮ್ ನ ಸಂಘರ್ಷ ಪೀಡಿತ ಮತ್ತು ತೊಂದರೆಗೆ ಸಿಲುಕಿರುವ ಇತರ ಪ್ರದೇಶಗಳಲ್ಲಿಯ ತನ್ನ ಪ್ರಜೆಗಳನ್ನು ಬಸ್ ಗಳ ಮೂಲಕ ಪೋರ್ಟ್ ಸುಡಾನ್ ಗೆ ಸಾಗಿಸುತ್ತಿದ್ದು, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಜಿದ್ದಾಕ್ಕೆ ರವಾನಿಸಲಾಗುತ್ತಿದೆ. ಜಿದ್ದಾದಿಂದ ವಾಣಿಜ್ಯ ವಿಮಾನಗಳು ಮತ್ತು ವಾಯಪಡೆಯ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತಿದೆ.
ಭಾರತವು ಜಿದ್ದಾ ಮತ್ತು ಪೋರ್ಟ್ ಸುಡಾನ್ಗಳಲ್ಲಿ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಿದ್ದು,ಖರ್ತೂಮ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅವುಗಳಿಗೆ ಅಗತ್ಯ ಸಹಕಾರವನ್ನು ನೀಡುತ್ತಿದೆ ಮತ್ತು ದಿಲ್ಲಿಯಲ್ಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೇಂದ್ರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.