ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಜೈಲುಶಿಕ್ಷೆ ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಮೇ 9ಕ್ಕೆ ಮುಂದೂಡಿಕೆ
![ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಜೈಲುಶಿಕ್ಷೆ ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಮೇ 9ಕ್ಕೆ ಮುಂದೂಡಿಕೆ ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಜೈಲುಶಿಕ್ಷೆ ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಮೇ 9ಕ್ಕೆ ಮುಂದೂಡಿಕೆ](https://www.varthabharati.in/sites/default/files/images/articles/2023/05/2/376046-1683049174.jpeg)
ಹೊಸದಿಲ್ಲಿ, ಮೇ 2: 2002ರ ಗುಜರಾತ್ ಗಲಭೆ ಸಂದರ್ಭ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆಗೈದ ಪ್ರಕರಣದ ಆರೋಪಿಗಳ ಜೈಲು ಶಿಕ್ಷೆ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ 9ಕ್ಕೆ ಮುಂದೂಡಿದೆ.
ಕೇಂದ್ರ ಹಾಗೂ ಗುಜರಾತ್ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಜೈಲು ಶಿಕ್ಷೆ ರದ್ದತಿಗೆ ಸಂಬಂಧಿಸಿದ ಮೂಲದಾಖಲೆಗಳನ್ನು ಹಾಜರುಪಡಿಸಬೇಕೆಂಬ ನ್ಯಾಯಾಲಯದ ಮಾರ್ಚ್ 27ರ ಆದೇಶದ ವಿರುದ್ಧ ಯಾವುದೇ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲವೆಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.
ಆದರೆ ಬಾನು ಹೊರತಾಗಿ ಇತರರು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸಾಲಿಸಿಟರ್ ಜನರಲ್ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಇಂತಹ ಅರ್ಜಿಗಳನ್ನು ಪುರಸ್ಕರಿಸುವುದರಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಸಂಬಂಧಪಡದವರು ಕೂಡಾ ನ್ಯಾಯಾಲಯದ ಮೆಟ್ಟಲೇರುವ ಪ್ರವೃತ್ತಿ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಬಿಡುಗಡೆಗೊಂಡ ಅಪರಾಧಿಗಳ ಪರ ವಾದಿಸಿದ ನ್ಯಾಯವಾದಿಗಳು , ತಮಗೆ ಬಾನು ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ಕಾಲಾವಕಾಶದ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜೋಸೆಫ್ ಅವರು ‘‘ನಾವು ಕೇವಲ ಕಾಲಮಿತಿ ನಿಗದಿಪಡಿಸುತ್ತಿದ್ದೇವೆ. ಯಾವುದೇ ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳಲಿ,ಇಂತಹ ಪ್ರಕ್ರಿಯಾತ್ಮಕ ವಿಚಾರಗಳ ಸಂಬಂಧವಾಗಿ ಕಾಲಹರಣವಾಗಬಾರದು. ನಾನು ಜೂನ್ 16ರಂದು ನಿವೃತ್ತನಾಗಲಿದ್ದೇನೆ. ಮೇ 19 ನನ್ನ ಕೆಲಸದ ಕೊನೆಯ ದಿನವಾಗಲಿದೆ. ನನ್ನ ಸೋದರಿ (ಜಸ್ಟೀಸ್ ನಾಗರತ್ನ) ಮೇ25ರವರೆಗೆ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಲಿದ್ದಾರೆ. ನೀವೆಲ್ಲರೂ ಸಮ್ಮತಿಸಿದಲ್ಲಿ ನಾವು ರಜಾ ಕಾಲದಲ್ಲಿ ಕುಳಿತ ಪ್ರಕರಣದ ಆಲಿಕೆ ಮುಕ್ತಾಯಗೊಳಿಸಬೇಕಿದೆ’’ ಎಂದು ತಿಳಿಸಿದರು.
ಆದಾಗ್ಯೂ, ಬೇಸಿಗೆ ರಜೆಗೆ ಮುನ್ನವೇ ಪ್ರಕರಣದ ಆಲಿಕೆಯನ್ನು ಪಟ್ಟಿ ಮಾಡಬಹುದೆಂದು ಸಾಲಿಸಿಟರ್ ಜನರಲ್ ಅವು ನ್ಯಾಯಪೀಠವನ್ನು ಆಗ್ರಹಿಸಿದರು. ಆನಂತರ ನ್ಯಾಯಪೀಠವು ಅರ್ಜಿಗಳ ಆಲಿಕೆಯನ್ನು ಮೇ 9ಕ್ಕೆ ಮುಂದೂಡಿತು.