ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾದಾಮಿ ಕ್ಷೇತ್ರವನ್ನು ದತ್ತು ಪಡೆಯುವೆ: ಸಿದ್ದರಾಮಯ್ಯ ಭಾವುಕ ಮಾತು

ಬಾದಾಮಿ: 'ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾದಾಮಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ' ಎಂದು ಬಾದಾಮಿ ಕ್ಷೇತ್ರದ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಗಳವಾರ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ನಾನು ಈಗಲೂ ನಿಮ್ಮ ಶಾಸಕ, ಮತ ಎಣಿಕೆ ಮುಗಿಯುವವರೆಗೆ ನಿಮ್ಮದೇ ಶಾಸಕ. ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕಿದ ಮೇಲೆ ಬಾದಾಮಿಯಲ್ಲಿ ಭೀಮಸೇನ ಚಿಮ್ಮನಕಟ್ಟಿ ಶಾಸಕನಾಗಿದ್ದರೂ ಕೂಡ ನಾನೇ ನಿಮ್ಮ ಶಾಸಕನಂತೆ ಇದ್ದು ಎಲ್ಲ ರೀತಿಯ ಅಭಿವೃದ್ಧಿ ಮಾಡಿಕೊಡುತ್ತೇನೆ'' ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ''ವರುಣಾದಲ್ಲಿ ಸೋಮಣ್ಣ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಪ್ರಧಾನ ಮಂತ್ರಿ ಮೋದಿ, ಅಮಿತ್ ಶಾ ಏನ್ ಅಭಿವೃದ್ಧಿ ಮಾಡಿದ್ದಾರೆ, ಅಚ್ಚೇ ದಿನ್ ಅಂದರೂ, ಏನ್ ಅಚ್ಚೇದಿನ್ ಬಂದಿದಿಯಾ'' ಎಂದು ಕಿಡಿಕಾರಿದರು.
''ಸ್ಟಾರ್ ಪ್ರಚಾರಕರಾಗಿ ನಮ್ಮಲ್ಲಿಯೂ ರಾಹುಲ್ ಗಾಂಧಿ, ಪ್ರಿಯಾಂಕಾ, ಮಲ್ಲಿಕಾರ್ಜುನ ಖರ್ಗೆ ಇದ್ದರಲ್ಲ'' ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: 24 ಮಂದಿ ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟನೆ ಮಾಡಿದ ಕಾಂಗ್ರೆಸ್







