ಕುಡಿಯುವ ನೀರು ಅನ್ಯ ಚಟುವಟಿಕೆಗಳಿಗೆ ಬಳಸದಿರಿ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್
"ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆಯ ವಿದ್ಯುತ್ ಸಂಪರ್ಕ ಕಡಿತಕ್ಕೆ ಸೂಚನೆ"

ಮಂಗಳೂರು: ಜಿಲ್ಲಾದ್ಯಂತ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡಿದೆ. ಹಾಗಾಗಿ ಕುಡಿಯುವ ನೀರು ಹೊರತುಪಡಿಸಿ ಇತರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶವಿಲ್ಲವೆಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಬುಧವಾರ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ 2019ರಲ್ಲೂ ಕಂಡು ಬಂದಿತ್ತು, ಇದೀಗ ಕಂಡುಬರುತ್ತಿರುವ ನೀರಿನ ಸಮಸ್ಯೆ ಯನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರು ಹೊರತುಪಡಿಸಿ ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ವರ್ಷದ ಮಾರ್ಚ್, ಎಪ್ರಿಲ್ನಲ್ಲಿ ಮಳೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ನೀರು ಪೂರೈಕೆ ಯಲ್ಲಿ ರೇಷನಿಂಗ್ ವ್ಯವಸ್ಥೆ ಅನಿವಾರ್ಯವಾಗಲಿದೆ. ಹಾಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ, ಸುರತ್ಕಲ್ ಹಾಗೂ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಪರ್ಯಾಯ ದಿನಗಳಲ್ಲಿ ನೀರು ಪೂರೈಸುವಂತೆ ಡಿಸಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಮಾತನಾಡಿ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ಇದೀಗ ನೀರಿನ ಮಟ್ಟವು 4.34 ಮೀ ಇದೆ. ಪ್ರಸ್ತುತ ಲಭ್ಯವಿರುವ ನೀರಿನ ಮಟ್ಟದ ಅನ್ವಯ ಮುಂದಿನ 20 ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದರು.
ದ.ಕ.ಜಿಪಂ ಸಿಇಒ ಡಾ. ಕುಮಾರ್ ಮಾತನಾಡಿ, ಮಾಣಿ ಮತ್ತು ಸರಪಾಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿದೆ. ಎ.ಎಂ.ಆರ್ ಡ್ಯಾಮ್ನ ನೀರನ್ನು ಅಧಾರವನ್ನಾಗಿರಿಸಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಎ.ಎಂ.ಆರ್. ಡ್ಯಾಮ್ನ ಡೌನ್ಸ್ಟ್ರೀಮ್ ನಲ್ಲಿ ಲಭ್ಯವಿರುವ ನೀರನ್ನು ಪಂಪ್ ಮೂಲಕ ಲಿಫ್ಟ್ ಮಾಡಿ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನಾಲ್ಕು ಎಂ.ಎಲ್.ಡಿಯಷ್ಟು ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ ನೀರಿನ ಲಭ್ಯತೆಯ ಅನುಸಾರ ಪರ್ಯಾಯ ದಿನಗಳಿಗೆ ಎರಡು ಎಂ.ಎಲ್.ಡಿಯನ್ನು ನೀರನ್ನು ಪಂಪ್ ಮಾಡಲಾಗುತ್ತಿದೆ. ಉಳ್ಳಾಲ ತಾಲೂಕಿನ ನರಿಂಗಾನ, ಬಾಳಪುಣೆ, ಕೊಣಾಜೆ, ತಲಪಾಡಿ ಪ್ರದೇಶಗಳಲ್ಲಿ ನೀರಿನ ಮೂಲಗಳು ಇಲ್ಲ. ಈ ಪ್ರದೇಶಗಳಲ್ಲಿ ಬೋರ್ವೆಲ್ಗಳನ್ನು ಕೊರೆಯಲಾಗಿದ್ದರೂ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ. ಪ್ರಸ್ತುತ 58 ಬೋರ್ವೆಲ್ಗಳನ್ನು ಡೀಪೆನ್ನಿಂಗ್, ಫ್ಲಷಿಂಗ್ ಮಾಡಲಾಗಿರುತ್ತದೆ. ಬೋರ್ವೆಲ್ಗಳ ಡೀಪೆನ್ನಿಂಗ್ ಮತು ಫ್ಲಷಿಂಗ್ ಕಾರ್ಯಗಳಿಗೆ ತಗುಲುವ ವೆಚ್ಚವನ್ನು 15ನೇ ಹಣಕಾಸು ನಿಧಿಯಿಂದ ಭರಿಸಲಾಗುತ್ತಿದೆ. ಪ್ರಸ್ತುತ ಎ.ಎಂ.ಆರ್. ಡ್ಯಾಮ್ನಲ್ಲಿ ಲಭ್ಯವಿರುವ ನೀರಿನ (13.20 ಮೀ) ಮಟ್ಟ ಅನುಸಾರ ಮುಂದಿನ 15 ರಿಂದ 20 ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದರು.
ನದಿಯ ಇಕ್ಕೆಲಗಳಲ್ಲಿ ಆರ್.ಆರ್ ನಂಬರ್ ಇರುವ 28 ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಯಾವುದೇ ಅನಧಿಕೃತ ಪ್ರಕರಣಗಳು ಕಂಡುಬಂದಿಲ್ಲ ಎಂದು ಮೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಪ್ರಸ್ತುತ ಎಎಂಆರ್ ಡ್ಯಾಮ್ನಿಂದ ಶೇ.20ರಷ್ಟು ನೀರನ್ನು ಕುಡಿಯುವ ಉದ್ದೇಶಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಎಸ್ಇಝಡ್ನವರು ಎಎಂಆರ್ ಡ್ಯಾಮ್ನಿಂದ ನೀರೆತ್ತುವುದನ್ನು ಸಂಪೂರ್ಣ ಸ್ಥಗಿತಗೊಳಿಸಿರುವದಾಗಿ ಎಂಆರ್ಪಿಎಲ್ ಸಂಸ್ಥೆಯ ಪ್ರತಿನಿಧಿ ಸಭೆಗೆ ತಿಳಿಸಿದರು.