ಬಿಜೆಪಿಯಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ

ಉಡುಪಿ, ಮೇ 3: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಹಾಗೂ ಮಲ್ಪೆ ಬಂದರು ಮತ್ತು ಮೀನುಗಾರಿಕೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಕುಂಜಿಬೆಟ್ಟು ವಿನಲ್ಲಿರುವ ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಬಿಡುಗಡೆಗೊಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ಕ್ಷೇತ್ರದ ಪ್ರಣಾಳಿಕೆಯಲ್ಲಿ ಉಡುಪಿಗೊಂದು ಸುಸಜ್ಜಿತ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಉಡುಪಿ ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಕಲ್ಸಂಕ ಜಂಕ್ಷನ್ನಲ್ಲಿ 70 ಮೀಟರ್ ವ್ಯಾಸವುಳ್ಳ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ, ನಗರಸಭೆಯ 35 ವಾರ್ಡ್ಗಳಲ್ಲಿಯೂ ವೈಜ್ಞಾನಿಕ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ ಎಂದರು.
ಬ್ರಹ್ಮಾವರದಲ್ಲಿ 100 ಬೆಡ್ಗಳ ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಾಣ, ಇಎಸ್ಐ ಆಸ್ಪತ್ರೆ ನಿರ್ಮಾಣ, ಬ್ರಹ್ಮಾವರ ಪುರಸಭೆ ರಚನೆ, ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆ, ಮಲ್ಪೆಯಲ್ಲಿ ಮಧ್ವಾಚಾರ್ಯ ಥೀಮ್ ಪಾರ್ಕ್ ನಿರ್ಮಾಣ, ಮಣಿಪಾಲದಲ್ಲಿ ವಿಶೇಷ ಆಹಾರ ವಲಯ ನಿರ್ಮಾಣ, ಸ್ವರ್ಣ ನದಿ ತೀರದಲ್ಲಿರುವ ಸರಕಾರಿ ದ್ವೀಪದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ, ತಾಜಾ ಮೀನಿನ ಮತ್ಸ್ಯ ಕ್ಯಾಂಟೀನ್ ಸ್ಥಾಪನೆ, ವಾರಾಹಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಸೀತಾನದಿಗೆ ನಿರಂತರ ವಾಗಿ ನೀರು ಹಾಯಿಸಿ ಜೀವ ತುಂಬುವ ಕಾರ್ಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮೀನುಗಾರಿಕೆ ಪ್ರತ್ಯೇಕ ಪ್ರಣಾಳಿಕೆಯಲ್ಲಿ ಬಂದರಿನ ಸ್ವಚ್ಛತೆಗಾಗಿ ಚರಂಡಿ ವ್ಯವಸ್ಥೆ, ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ, ಮೀನುಗಾರಿಕಾ ಯಾಂತ್ರಿಕ ಬೋಟುಗಳಿಗೆ ದಿನಕ್ಕೆ 400 ಲೀಟರ್ ಡಿಸೇಲ್ ಸಬ್ಸಿಡಿ, ಕೃಷಿ ಕ್ಷೇತ್ರಕ್ಕೆ ಇರುವ ಸೌಲಭ್ಯವನ್ನು ಮೀನುಗಾರಿಕಾ ಕ್ಷೇತ್ರಕ್ಕೆ ವಿಸ್ತರಣೆ, ನಾಡದೋಣಿ ಮೀನುಗಾರರಿಗೆ ನಿರಂತರವಾಗಿ ತಿಂಗಳಿಗೆ 500 ಲೀಟರ್ ಸೀಮೇಎಣ್ಣೆ ವಿತರಣೆ, ಅಂತಾರಾಷ್ಟ್ರೀಯ ಮಟ್ಟದ ಫಿಶ್ ಅಕ್ವೇರಿಯಂ ನಿರ್ಮಾಣ, ಮೀನುಗಾರಿಕಾ ವಿಶೇಷ ಕೈಗಾರಿಕಾ ವಲಯ ನಿರ್ಮಾಣ ಮಾಡುವುದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಉಪಸ್ಥಿತರಿದ್ದರು.