ಅವಿಭಜಿತ ದಕ್ಷಿಣ ಕನ್ನಡದ ಎಲ್ಲಾ 13 ಸೀಟು ಕಾಂಗ್ರೆಸ್ಗೆ: ವೀರಪ್ಪ ಮೊಯ್ಲಿ ಭವಿಷ್ಯ

ಉಡುಪಿ, ಮೇ 3: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 13 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮತ್ರಿ ಹಾಗೂ ಕಾಂಗ್ರೆಸ್ನ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯ ಎಂ.ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಯ್ಲಿ, ಬಿಜೆಪಿ ಡಬಲ್ ಇಂಜಿನ್ ಸರಕಾರದ ಜನ ವಿರೋಧಿ ನೀತಿಗಳು ಹಾಗೂ ಅಪರಿಮಿತ ಭ್ರಷ್ಟಾಚಾರ ಜನರ ನಂಬಿಕೆಯನ್ನು ಹುಸಿಗೊಳಿಸಿ, ಸಂಕಷ್ಟಕ್ಕೆ ನೂಕಿದೆ ಎಂದವರು ವಿವರಿಸಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ 9 ವರ್ಷಗಳ ಆಡಳಿತಾವಧಿಯಲ್ಲಿ ಭಾರತದಲ್ಲಿ ಬಡವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ವೃದ್ಧಿಸಿದೆ. ಯುಪಿಎ ಸರಕಾರ ತನ್ನ ಆಡಳಿತಾವಧಿಯಲ್ಲಿ ಸುಮಾರು 26 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲಕ್ಕೆತಿದ್ದರೆ, ಬಿಜೆಪಿ ಆಡಳಿತಾವಧಿಯಲ್ಲಿ ಅಷ್ಟೇ ಸಂಖ್ಯೆಯ ಜನರು ಮತ್ತೆ ಬಡತನದ ರೇಖೆಯಿಂದ ಕೆಳಗಿಳಿದಿದ್ದಾರೆ. ಅಲ್ಲದೇ ಕೋವಿಡ್-19ರ ಅವಧಿಯಲ್ಲಿ ಇನ್ನೂ 7.5 ಕೋಟಿ ಜನ ಬಡತನದ ರೇಖೆಯ ಅಡಿಗಿಳಿದರು ಎಂದು ಅವರು ವಿವರಿಸಿದರು.
ನರೇಂದ್ರ ಮೋದಿ ಸರಕಾರದಲ್ಲಿ ದೇಶದ ಶೇ.1ರಷ್ಟು ಜನರು ಮಾತ್ರ ಅಭಿವೃದ್ಧಿ ಹಾಗೂ ಅದರ ಲಾಭದ ಸುಖವನ್ನು ಅನುಭವಿಸುತಿದ್ದಾರೆ. ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟದಲ್ಲಿ ಅಸಮಾನತೆ ಎಂಬುದು ವೇಗವಾಗಿ ವಿಸ್ತರಣೆ ಗೊಳ್ಳುತ್ತಿದೆ. ಇದರೊಂದಿಗೆ ದಲಿತರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಮಾಣ ಸಹ ಕಳವಳಕರ ರೀತಿಯಲ್ಲಿ ಹೆಚ್ಚುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ವ್ಯಾಪಕವಾಗಿ ಚುನಾವಣಾ ಪ್ರಚಾರ ಭಾಷಣ ನಡೆಸಿದ ರಾಜ್ಯಗಳಲ್ಲಿ ಬಿಜೆಪಿ ವೈಫಲ್ಯತೆ ಕಂಡಿದೆ ಎಂದ ವೀರಪ್ಪ ಮೊಯ್ಲಿ ಅವರು ಕೇರಳ, ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ 18 ರಾಜ್ಯಗಳ ಉದಾಹರಣೆಯನ್ನು ನೀಡಿದರು.
ಭ್ರಷ್ಟಾಚಾರಕ್ಕೆ ಕುಖ್ಯಾತಿಯನ್ನು ಪಡೆದಿರುವ ಬಿಜೆಪಿ ಸರಕಾರಗಳು ಪ್ರತಿಯೊಂದು ಕ್ಷೇತ್ರವನ್ನೂ ಸಂಪೂರ್ಣ ಭ್ರಷ್ಟಗೊಳಿಸಿ ಬಿಟ್ಟಿದೆ. ಇದೀಗ ಜನಸಾಮಾನ್ಯರ ಬದುಕನ್ನು ಸಹ ಅದು ಕಾಡುತ್ತಿದೆ. ದೇಶದ ಜನರು ಸಹ ಸಾಂಪ್ರದಾಯಿಕ ಹಾಗೂ ಸಂಪ್ರದಾಯವಾದಿಗಳಾಗಬೇಕೆಂದು ಬಿಜೆಪಿ ಬಯಸುತಿದ್ದು, ಇದಕ್ಕಾಗಿಯೇ ಶಾಲಾ ಪಠ್ಯಪುಸ್ತಕಗಳಿಂದ ಡಾರ್ವಿನ್ ಜೀವ ವಿಕಾಸ ಥಿಯರಿಯನ್ನು ತೆಗೆದುಹಾಕಲು ಮುಂದಾಗಿದೆ ಎಂದು ಆರೋಪಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಜಿ ಕೇಂದ್ರ ಸಚಿವ ಮೊಯ್ಲಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶಾಂತಿ ಭಂಗಕ್ಕೆ ಪ್ರಯತ್ನಿಸುವ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಲಾಗಿದೆ. ಆದರೆ ಬಿಜೆಪಿ ಇದರಲ್ಲಿ ಬಜರಂಗದಳವನ್ನು ಎಳೆದುತಂದು ವಿವಾದವನ್ನು ಬೆಳೆಸಲು ನೋಡುತ್ತಿದೆ ಎಂದರು.
ಬಿಜೆಪಿಯ ನೆಚ್ಚಿನ ನಾಯಕರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಗಾಂಧೀಜಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಆರ್ಎಸ್ಎಸ್ನ್ನು ನಿಷೇಧಿಸಲು ಮುಂದಾಗಿದ್ದರು. ಆದರೆ ಪ್ರಧಾನಿ ಜವಾಹರಲಾಲ್ ನೆಹರು ಅವರು ಇದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಮೊಯ್ಲಿ ಇತಿಹಾಸವನ್ನು ಬಿಜೆಪಿಗೆ ನೆನಪಿಸಿದರು.
ಬಿಜೆಪಿ ಕರ್ನಾಟಕ ಸೇರಿ ವಿವಿದೆಡೆಗಳಲ್ಲಿ ಜಾರಿಗೆ ತಂದ ‘ಆಪರೇಷನ್ ಕಮಲ’ ಎಂಬುದು ಪ್ರಜಾಪ್ರಭುತ್ವದ ಕಗ್ಗೊಲೆ. ಕಾಂಗ್ರೆಸ್ ಎಂದೂ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಅಂಥ ಕುತಂತ್ರಗಳಿಗೆ ಮುಂದಾಗುವುದಿಲ್ಲ ಎಂದು ಮೊಯ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕ ಹಾಗೂ ಸಂಸದ ಟಿ.ಎನ್.ಪ್ರತಾಪನ್, ಪಕ್ಷದ ಜಿಲ್ಲಾ ನಾಯಕರಾದ ಅಶೋಕ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಂ.ಎ. ಗಫೂರ್, ದಿನೇಶ್ ಪುತ್ರನ್, ಹರೀಶ್ ಕಿಣಿ, ಮುರಲಿ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ರಮೇಶ್ ಕಾಂಚನ್, ಸೌರಭ ಬಲ್ಲಾಳ್, ಕುಶಲ ಶೆಟ್ಟಿ ಬಿ., ದಿವಾಕರ ಕುಂದರ್, ಮಹಾಬಲ ಕುಂದರ್, ಮಂಜುನಾಥ ಪೂಜಾರಿ, ಕಿರಣ್ ಹೆಗ್ಡೆ, ಹಬೀಬ್ ಅಲಿ, ನೌಷಾದ್, ಹರೀಶ್ ಶೆಟ್ಟಿ ಪಾಂಗಾಳ, ಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.