ಮಂಗಳೂರು : ಮೈನಾ ಸದಾನಂದ ಶೆಟ್ಟಿ ನಿಧನ

ಮಂಗಳೂರು: ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಖ್ಯಾತ ಹೋಟೆಲ್ ಉದ್ಯಮಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ. ಸದಾನಂದ ಶೆಟ್ಟಿ ಅವರ ಪತ್ನಿ ಮುಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75) ಅವರು ಅಲ್ಪ ಕಾಲದ ಆಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8ಗಂಟೆಗೆ ನಿಧನರಾದರು.
ಮೃತರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದು, ಶ್ರೀದೇವಿ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಮಂಗಳೂರಿನ ಕ್ವಾಲಿಟಿ-ಕುಡ್ಲ ಹೋಟೆಲ್ ಸಮೂಹಗಳನ್ನು ತನ್ನ ಕ್ರಿಯಾಶೀಲತೆ ಇಂದ ಬೆಳೆಸಿ, ರಾಜ್ಯದ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಶ್ರಮಿಸಿದವರು.
ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ನಡೆದಿದ್ದ ಚಾರಿತ್ರಿಕ ವಿಶ್ವ ಬಂಟರ ಸಮ್ಮೇಳನದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ, ಗೌರವಗಳಿಗೆ ಪಾತ್ರ ರಾಗಿದ್ದರು. ಮುಲ್ಕಿ ಕುಬೆವೂರು ದೊಡ್ಡಮನೆಯ ಕುಟುಂಬ ಸ್ನೇಹ ಮಿಲನ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಗುರುವಾರ ಬೆಳಗ್ಗೆ 10.30 ರಿಂದ 11.30ರ ತನಕ ಮಂಗಳೂರು ಎಮ್. ಜಿ. ಕ್ರಾಸ್ ರಸ್ತೆಯ "ಸದಾನಂದ " ಸ್ವಗೃಹದಲ್ಲಿ ಪಡೆಯಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.







