ಕುಸ್ತಿಪಟುಗಳು - ಪೊಲೀಸರ ಮಧ್ಯೆ ಸಂಘರ್ಷ: ಕಾಂಗ್ರೆಸ್ ಮುಖಂಡ ದೀಪೇಂದರ್ ಹೂಡಾ ಭೇಟಿಗೆ ಅವಕಾಶ ನಿರಾಕರಣೆ
ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬೃಜ್ಭೂಷಣ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿ ಮಾಡಲು ಆಗಮಿಸಿದ್ದ ತಮ್ಮನ್ನು ಪೊಲೀಸರು ವಶಕ್ಕೆ ಪಡೆದು ಭೇಟಿಗೆ ಅವಕಾಶ ನಿರಾಕರಿಸಿದ್ದಾಗಿ ಕಾಂಗ್ರೆಸ್ ಮುಖಂಡ ದೀಪೇಂದರ್ ಹೂಡಾ ಆಪಾದಿಸಿದ್ದಾರೆ. ಏತನ್ಮಧ್ಯೆ ತಡರಾತ್ರಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾಗಿ ಪ್ರತಿಭಟನಾಕಾರರು ದೂರಿದ್ದಾರೆ.
"ನಾನು ಐದು ನಿಮಿಷಗಳ ಅವಧಿಗೆ ಕುಸ್ತಿಪಟುಗಳನ್ನು ಭೇಟಿ ಮಾಡಲು ಬಯಸಿದ್ದೇನೆ. ಭದ್ರತಾ ಅಧಿಕಾರಿಯೂ ಇಲ್ಲದೇ ಏಕಾಂಗಿಯಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತೇನೆ. ಮಹಿಳಾ ಕುಸ್ತಿಪಟುಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತೇನೆ ಹಾಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ" ಎಂದು ಹೂಡಾ ಪೊಲೀಸರಿಗೆ ಮನವಿ ಮಾಡುತ್ತಿರುವ ವೀಡಿಯೊ ತುಣುಕನ್ನು ಹೂಡಾ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ತಡರಾತ್ರಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ಜಂತರ್ ಮಂತರ್ ಸುತ್ತ ಬಿಗಿ ಭದ್ರತೆ ಆಯೋಜಿಸಲಾಗಿದೆ. ಕುಸ್ತಿಪಟುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ.
"ನಮಗೆ ಇಡೀ ದೇಶದ ಬೆಂಬಲ ಬೇಕು. ಪ್ರತಿಯೊಬ್ಬರೂ ದೆಹಲಿಗೆ ಬರಬೇಕು. ಪೊಲೀಸರು ನಮ್ಮ ಮೇಲೆ ಬಲ ಪ್ರಯೋಗ ಮಾಡುತ್ತಿದ್ದಾರೆ. ಮಹಿಳೆಯರನ್ನು ನಿಂದಿಸುತ್ತಿದ್ದಾರೆ. ಆದರೆ ಬೃಜ್ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಬಜರಂಗ್ ಪೂನಿಯಾ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
ಪ್ರತಿಭಟನಾಕಾರರು ಮಡಚುವ ಬೆಡ್ಗಳನ್ನು ರಾತ್ರಿಯ ವಿಶ್ರಾಂತಿಗಾಗಿ ತಂದ ಸಂದರ್ಭದಲ್ಲಿ ರಾತ್ರಿ 11 ಗಂಟೆಯ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ. ಪೊಲೀಸರು ತಮ್ಮ ಜತೆ ಅನುಚಿತವಾಗಿ ವರ್ತಿಸಿ, ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ.
"ನೀವು ನಮ್ಮನ್ನು ಕೊಲ್ಲಲು ಬಯಸಿದರೆ ಕೊಲ್ಲಿ. ನಾವು ದೇಶಕ್ಕಾಗಿ ಪದಕ ಗೆದ್ದುದು ಇಂದಿನ ಪರಿಸ್ಥಿತಿ ನೋಡುವ ಸಲುವಾಗಿಯೇ? ನಾವು ಊಟ ಮಾಡಿಲ್ಲ. ಪ್ರತಿಯೊಬ್ಬ ಪುರುಷನಿಗೆ ಮಹಿಳೆಗೆ ಕಿರುಕುಳ ನೀಡುವ ಹಕ್ಕು ಇದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ. ನಮ್ಮನ್ನು ಅವರು ಕೊಲ್ಲಬಹುದು" ಎಂದು ವಿನೇಶ್ ಫೋಗತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.