ಮಣಿಪುರದಲ್ಲಿ ಹಿಂಸಾಚಾರ: ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಅಮಿತ್ ಶಾ ಚರ್ಚೆ
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಗುರುವಾರ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾರೆ. ಬುಡಕಟ್ಟು ಜನಾಂಗದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಣಿಪುರದ ಪರಿಸ್ಥಿತಿಯನ್ನು ಗಮನಿಸುತ್ತಿರುವ ಕೇಂದ್ರ ಸರಕಾರವು ಈಶಾನ್ಯ ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜನೆಗಾಗಿ ಕ್ಷಿಪ್ರ ಕಾರ್ಯಪಡೆಯ (RAF) ತಂಡಗಳನ್ನು ಕೂಡ ಕಳುಹಿಸಿದೆ.
ಆರ್ಎಎಫ್ ಗಲಭೆಯಂತಹ ಸಂದರ್ಭಗಳನ್ನು ನಿಭಾಯಿಸಲು ವಿಶೇಷ ಪಡೆಯಾಗಿದೆ.
ಗೃಹ ಸಚಿವ ಶಾ ಅವರು ಮಣಿಪುರ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ರಾಜ್ಯದ ಪರಿಸ್ಥಿತಿ ಹಾಗೂ ಶಾಂತಿ ಪುನಃಸ್ಥಾಪಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆ ಹಾಗೂ ಅಸ್ಸಾಂ ರೈಫಲ್ಸ್ನ ಪಡೆಗಳನ್ನು ಈಗಾಗಲೇ ರಾಜ್ಯದಲ್ಲಿ ನಿಯೋಜಿಸಲಾಗಿದೆ.
ಈ ಎರಡು ಪಡೆಗಳ ಹೊರತಾಗಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ಸಾಕಷ್ಟು ಸಂಖ್ಯೆಯ ಅರೆಸೇನಾ ಪಡೆಗಳು ಮಣಿಪುರದಲ್ಲಿ ಲಭ್ಯವಿವೆ.
ಆರ್ಎಎಫ್ನ ಐದು ತುಕಡಿಗಳನ್ನು ಇಂಫಾಲ್ಗೆ ವಿಮಾನದಲ್ಲಿ ರವಾನಿಸಲಾಗಿದೆ ಮತ್ತು 15 ಇತರ ಸಾಮಾನ್ಯ ಕರ್ತವ್ಯ ಪಡೆಗಳನ್ನು ರಾಜ್ಯಕ್ಕೆ ನಿಯೋಜಿಸಲು ಸನ್ನದ್ಧ ಸ್ಥಿತಿಯಲ್ಲಿರಲು ಕೇಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ನಿಯೋಜನೆಗಾಗಿ ಸಿಆರ್ಪಿಎಫ್ನ ಸುಮಾರು 15 ಕಂಪನಿಗಳು ಈಗಾಗಲೇ ಲಭ್ಯವಿವೆ ಎಂದು ಮೂಲಗಳು ತಿಳಿಸಿವೆ