ಅನುದಾನ ಬಿಡುಗಡೆಯಾಗಿ 8 ವರ್ಷ ಕಳೆದರೂ ಮುಲ್ಕಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ: ಅಭಯ ಚಂದ್ರ ಜೈನ್

ಮಂಗಳೂರು: ಮುಲ್ಕಿಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಎಂಟು ವರ್ಷಗಳ ಹಿಂದೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಎಂಟು ವರ್ಷ ಕಳೆದರೂ ಬಿಜೆಪಿ ಸರಕಾರ ಈ ವರೆಗೆ ಬಸ್ ನಿಲ್ದಾಣ ನಿರ್ಮಿಸಲು ಜಾಗವನ್ನು ಗುರುತಿಲ್ಲ ಹಾಗೂ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಮಾಜಿ ಶಾಸಕ ಅಭಯ ಚಂದ್ರ ಜೈನ್ ಆರೋಪಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ ಈ ಅನುದಾನ ಪಟ್ಟಣ ಪಂಚಾಯತ್ನ ಖಾತೆಯಲ್ಲಿ ಭದ್ರವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತವಿದ್ದಾಗ ಮುಲ್ಕಿ-ಮೂಡಬಿದ್ರೆಯಲ್ಲಿ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಆನೇಕ ಕಾಮಗಾರಿ ದೊಡ್ಡ ಮಟ್ಟದಲ್ಲಿ ನಡೆದಿದೆ. ಶೇ 90ರಷ್ಟು ಅಭಿವೃದ್ಧಿ ನಡೆದಿದೆ ಎಂದು ಹೇಳಿದರು.
2018ರಲ್ಲಿ ನಡೆದಿರುವುದು ಭಾವನಾತ್ಮಕ ಚುನಾವಣೆ ಆಗಿತ್ತು. ಆಗ ಚುನಾವಣಾ ಕಣದಲ್ಲಿದ್ದ ನನ್ನ ಮೇಲೆ ಬಿಜೆಪಿ ಆನೇಕ ಆರೋಪಗಳನ್ನು ಮಾಡಿತ್ತು. ಕೆಲವು ಕಡೆ ಕೊಲೆ ನಡೆದಿತ್ತು. ಅದನ್ನು ಅಭಯಚಂದ್ರ ತಲೆಗೆ ಕಟ್ಟಲಾಗಿತ್ತು. ಹಿಂದುವನ್ನು ಕೊಲ್ಲಿಸಿದ್ದಾನೆ ಎಂದು ಶಾಸಕನಾಗಿದ್ದ ನನ್ನ ಮೇಲೆ ಬಿಜೆಪಿ ಆರೋಪ ಮಾಡಿತ್ತು. 2023ರ ಚುನಾವಣೆಯಲ್ಲಿ ಬಿಜೆಪಿಯ ಯಾವುದೇ ಆಟ ನಡೆಯದು. ಬಿಜೆಪಿಯ ಪೊಳ್ಳು ಭರವಸೆಗಳನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮೂಡಬಿದ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದರು.
ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎನ್ನುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 8 ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಶಾಸಕರು ಜಯ ಗಳಿಸಲಿದ್ದಾರೆ ಎಂದು ಹೇಳಿದರು.
ನಾನು ಮೊದಲು ಮೂಡಬಿದ್ರೆ ಶಾಸಕನಾದ ಸಂದರ್ಭದಲ್ಲಿ ಮೂಡಬಿದ್ರೆಯಲ್ಲಿ ವಿಎ ಕಚೇರಿ ಮಾತ್ರ ಇತ್ತು. ಅದೇ ಕಚೇರಿಯಲ್ಲಿ ಆರ್ಐ ಕೆಲಸ ಮಾಡುತ್ತಾ ಇದ್ದರು. ಮೂಡಬಿದ್ರೆ ಹಾಗೂ ಮುಲ್ಕಿ ತಾಲೂಕು ಆಗಬೇಕು ಎನ್ನುವ ಕನಸು ನನ್ನದಾಗಿತ್ತು. ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಆಗ ಮೂಡಬಿದ್ರೆಗೆ ವಿಶೇಷ ತಹಶೀಲ್ದಾರ್ ನೇಮಕ ಮಾಡಿಸುವಲ್ಲಿ ನಾನು ಶಾಸಕನಾಗಿ ಯಶಸ್ವಿಯಾಗಿದ್ದೆ. ಆನಂತರ ಮೂಡಬಿದ್ರೆಯಲ್ಲಿ ತಹಶೀಲ್ದಾರ್ಗೆ ಕುಳಿತುಕೊಳ್ಳಲು ಪಡಶಾಲೆಯನ್ನು ಶಾಸಕರ ಮತ್ತು ಜಿಲ್ಲಾಧಿಕಾರಿ ಅನುದಾನದಲ್ಲಿ ನಿರ್ಮಿಸಲಾಯಿತು. ಮುಲ್ಕಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ತಹಶೀಲ್ದಾರ್ ನೇಮಕಗೊಂಡರು. ಎರಡೂ ಕಡೆಗಳಲ್ಲಿ ತಹಶೀಲ್ದಾರರ ಕಚೇರಿಗೆ ಸ್ಥಳ ಕಾಯ್ದಿರಿಸಲಾಗಿತ್ತು. ಈಗ ಮೂಡಬಿದ್ರೆ ಮತ್ತು ಮುಲ್ಕಿ ತಾಲೂಕು ಆಗಿ ಎರಡೂ ಕಡೆಗಳಲ್ಲೂ ತಾಲೂಕು ಕಚೇರಿ ನಿರ್ಮಾಣವಾಗಿದೆ. ಮೂಡಬಿದ್ರೆ ತಾಲೂಕು ಆಗುವ ಮೊದಲೇ ಅಲ್ಲಿ ಕೋರ್ಟ್ ನಿರ್ಮಾಣವಾಗಿತ್ತು. ಪಶುಸಂಗೋಪನಾ ಇಲಾಖೆಯ ಕೈಯಲ್ಲಿ 2 ಎಕ್ರೆಯ ಪೈಕಿ ಒಂದು ಎಕ್ರೆಯನ್ನು ತಾಲೂಕು ಕಚೇರಿಗೆ ಒದಗಿಸಲಾಗಿತ್ತು ಎಂದರು.
4ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ: 4 ಕೋಟಿ ರೂ. ವೆಚ್ಚದಲ್ಲಿ ಪುಚ್ಚೆಮುಗೇರುವಿನಲ್ಲಿ ನದಿಗೆ ವೆಂಟೆಟ್ ಡ್ಯಾಮ್ ಕಟ್ಟಿ ಮೂಡಬಿದ್ರೆಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಯನ್ನು ತಮ್ಮ ಶಾಸಕತ್ವದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ನೀರು ಪೂರೈಕೆಗೆ ದಿನದ 24 ಗಂಟೆಯೂ ವಿದ್ಯುತ್ ಸರಬರಾಜಿಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುಷ್ಠಾನಗೊಳಿಸಲಾಗಿತ್ತು.
ಮೂಡಬಿದ್ರೆಯಲ್ಲಿ ರಿಂಗ್ರೋಡ್, ಮುಲ್ಕಿಯ ಕಿನ್ನಿಗೋಳಿಗೆ 18 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕುಮಾರಸ್ವಾಮಿ-ಯಡಿಯೂರಪ್ಪ ನೇತೃತ್ವದ ಸರಕಾರ ಪತನಗೊಂಡು ರಾಜ್ಯದಲ್ಲಿ 4 ತಿಂಗಳು ರಾಷ್ಟ್ರಪತಿ ಆಡಳಿತವಿದ್ದಾಗ ರಾಜ್ಯಪಾಲರ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಇದು ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಮೊದಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಿತ್ತು. ಮರವೂರಿನಲ್ಲಿ ಅಣೆಕಟ್ಟು ನಿರ್ಮಿಸಿ ಬಹುಗ್ರಾಮಗಳಿಗೆ ಕುಡಿಯುವ ನೀರುವ ಸರಬರಾಜು ಮಾಡುವ ಜಿಲ್ಲೆಯ ಎರಡನೇ ಬಹುಗ್ರಾಮ ಯೋಜನೆ 50 ಕೋಟಿ ರೂ. ವೆಚ್ಚದಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದಾಗ ಅನುಷ್ಠಾನಗೊಂಡಿತ್ತು. ಮಂಗಳೂರು ಮಹಾನಗರಪಾಲಿಕೆ ಬರುವ ನೀರನ್ನು ಪೈಪ್ಲೈನ್ ಮೂಲಕ ಮುಲ್ಕಿಗೆ ಸರಬರಾಜು ಮಾಡುವ 4.5 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.







