ಮೇ 6: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕಾರ್ಕಳಕ್ಕೆ ಭೇಟಿ

ಉಡುಪಿ, ಮೇ 4: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮೇ 6ರಂದು ಕಾರ್ಕಳದಲ್ಲಿ ವಿ.ಸುನಿಲ್ ಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಅಪರಾಹ್ನ 1:00ಕ್ಕೆ ಕಾರ್ಕಳ ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀವೆಂಕಟರಮಣ ದೇವಸ್ಥಾನದವರೆಗೆ ಅವರ ರೋಡ್ ಶೋ ನಡೆಯಲಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಅವರು ಸಭೆಯನ್ನು ದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ 20ರಿಂದ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ಅದೇ ರೀತಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಾಳೆ ಮಲ್ಪೆಯಲ್ಲಿ ರೋಡ್ಶೋ ನಡೆಸಲಿದ್ದಾರೆ ಎಂದರು. ಅಪರಾಹ್ನ 3:30ಕ್ಕೆ ಮಲ್ಪೆಯ ಏಳೂರು ಮೊಗವೀರ ಸಭಾಭವನದಿಂದ ಅವರ ರೋಡ್ ಶೋ ಪ್ರಾರಂಭಗೊಳ್ಳಲಿದ್ದು, ವಡಬಾಂಡೇಶ್ವರ ಸರ್ಕಲ್ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸುರೇಶ್ ನಾಯಕ್ ತಿಳಿಸಿದರು.
ನಾಳೆ ಸಂಜೆ 5:30ಕ್ಕೆ ಪೆರ್ಡೂರಿನಲ್ಲಿ ಮಹಿಳಾ ಮೋರ್ಚಾದಿಂದ ಪಾದಯಾತ್ರೆ ನಡೆಯಲಿದೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಪಾಲ್ಗೊಳ್ಳಲಿದ್ದಾರೆ ಎಂದರು.