ಕರಾವಳಿಯಲ್ಲಿ ಬಿಜೆಪಿ ಸೋಲಿಸಲು ಬರಹಗಾರರ, ಚಿಂತಕರ ಸಭೆ

ಮಂಗಳೂರು: ಸದಾ ಕೋಮುಹಿಂಸೆಯಿಂದ ನಲುಗುವ ಕರಾವಳಿ ಜಿಲ್ಲೆಗಳಲ್ಲಿ ನಿರುದ್ಯೋಗ, ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣದಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬಿಜೆಪಿ ಪರಿವಾರದ ಮತೀಯ ರಾಜಕಾರಣದಿಂದ ಮಂಗಳೂರು ಸಹಿತ ಕರಾವಳಿ ಪ್ರದೇಶಗಳು ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿವೆ. ಕಲೆ, ಸಂಸ್ಕೃತಿ, ಜನಪರ ಹೋರಾಟಗಳಿಂದ ಸಮೃದ್ದವಾಗಿದ್ದ ಮಂಗಳೂರು ಈಗ ಹಿಂದೂ, ಮುಸ್ಲಿಂ ವಿಭಜನೆಯ ರಾಜಕಾರಣದ ಮಸಿ ಮೆತ್ತಿಸಿಕೊಂಡಿದೆ. ಕರಾವಳಿಯ ಬ್ಯಾಂಕ್ಗಳು ವಿಲೀನದ ಹೆಸರಿನಲ್ಲಿ ಕೈ ತಪ್ಪಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯ ಜನತೆ ಕೋಮುವಾದದ ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯನ್ನು ಸೋಲಿಸಲು ಮುಂದಾಗಬೇಕು ಎಂದು ನಗರದ ಖಾಸಗಿ ಸಭಾಂಗಣದಲ್ಲಿ ಸಭೆ ಸೇರಿದ ಬರಹಗಾರರ, ಚಿಂತಕರ, ಸಾಮಾಜಿಕ ಕಾರ್ಯಕರ್ತರು ಕರೆ ನೀಡಿದ್ದಾರೆ.
ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿ ಕಂಪೆನಿಗಳಿಗೆ ಹಸ್ತಾಂತರ ಮಾಡಲಾಗಿವೆ. ಸ್ಥಳೀಯ ವಿದ್ಯಾವಂತ ಯುವಜನರು ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ. ಮತ್ತೊಂದೆಡೆ ನರೇಂದ್ರ ಮೋದಿ ನಾಯಕತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ದೇಶದ ಮೇಲೆ ಹೇರಲಾಗಿದೆ. ಪ್ರಶ್ನಿಸುವ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಜಾತ್ಯತೀತತೆ, ಪ್ರಜಾಪ್ರಭುತ್ವ ಅಪಾಯಕ್ಕೆ ಗುರಿಯಾಗಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯು ನಾಡಿನ ಭವಿಷ್ಯದ ನಿಟ್ಟಿನಲ್ಲಿ ನಿರ್ಣಾಯಕವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿವೆ.
ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನರೇಂದ್ರ ನಾಯಕ್, ನ್ಯಾಯ ವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಎರಿಕ್ ಲೋಬೋ, ನಿವೃತ್ತ ಪೊಲೀಸ್ ಅಧಿಕಾರಿ ಟಿಸಿಎಂ ಶರೀಫ್, ಪಟ್ಟಾಭಿ ರಾಮ ಸೋಮಯಾಜಿ, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಟಿಆರ್ ಭಟ್, ರಿಯಾಝ್ ಬಂಟ್ವಾಳ, ಸಾಮಾಜಿಕ ಚಿಂತಕರಾದ ಆಸುಂತಾ ಡಿಸೋಜ, ಫ್ಲೇವಿ ಕ್ರಾಸ್ತಾ, ಕ್ವೀನೀ ಪರ್ಸಿ ಆನಂದ್, ಪ್ರಭಾಕರ್ ಕಾಪಿಕಾಡ್, ರಘುರಾಜ್, ಡಾ.ವಸಂತ ಕುಮಾರ್, ಶಿವಾನಂದ್ ಕೋಡಿ, ಆಶಾ ಬೋಳೂರು, ಲಕ್ಷ್ಮಣ್ ವಾಮಂಜೂರು, ವಿನೀತ್ ದೇವಾಡಿಗ, ಜೆ ಇಬ್ರಾಹಿಂ, ಮುರಳೀಧರ್, ಬೆನೆಟ್ ಅಮ್ಮನ್ನ, ಸದಾಶಿವ ಬಂಗೇರಾ, ರಮೇಶ್ ಉಳ್ಳಾಲ್, ಪ್ರವೀಣ್ ಬಂಟ್ವಾಳ್ ಪಾಲ್ಗೊಂಡಿದ್ದರು.