ಗೋ ರುದ್ರಭೂಮಿ ಸ್ಥಾಪನೆ ಅಸ್ಪೃಶ್ಯತೆ ಆಚರಣೆಯ ಸಂಕೇತ: ಕಾಪು ಬಿಜೆಪಿ ಅಭ್ಯರ್ಥಿ ವಿರುದ್ಧ ಸುಂದರ ಮಾಸ್ಟರ್ ಆಕ್ರೋಶ

ಉಡುಪಿ: ಉಚ್ಚಿಲದಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಶವ ಸಂಸ್ಕಾರ ಮಾಡಲು ಇರುವ ಸಾರ್ವಜನಿಕ ಹಿಂಧೂ ರುದ್ರಭೂಮಿಗಾಗಿ ಹಲವಾರು ವರ್ಷಗಳಿಂದ ನಡೆಸುತ್ತಿರುವ ಹೋರಾಟವನ್ನು ಕಂಡು ಕಣ್ಣು ಮುಚ್ಚಿ ಕುಳಿತಿರುವ ಕಾಪು ಬಿಜೆಪಿ ಅಭ್ಯರ್ಥಿ ಸುರೇಶ ಶೆಟ್ಟಿ ಗುರ್ಮೆ ಯವರು , ಈಗ ಪ್ರಾಣಿಯಾದ ದನಗಳಿಗೆ ರುಧ್ರಭೂಮಿ ಕಟ್ಟಿಸುವ ಸಂಕಲ್ಪ ಮಾಡಿರುವುದು ಪರಿಶಿಷ್ಟರಿಗೆ ಮಾಡಿರುವ ಅವಮಾನ ಮತ್ತು ಅಸ್ಪೃಶ್ಯತೆ ಆಚರಣೆಯ ಸಂಕೇತವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಯ ಮುಖಂಡ ತೀರಿಕೊಂಡು ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲದೇ ಉಚ್ಚಿಲ ಪಂಚಾಯತ್ ಎದುರು ಶವ ಇಟ್ಟು ಶವ ಸುಡಲು ದಲಿತರು ಮುಂದಾದಾಗ ಬಾಯಿ ಮುಚ್ಚಿ ಕುಳಿತಿದ್ದ ಗುರ್ಮೆಯವರಿಗೆ ಈಗ ಪರಿಶಿಷ್ಟ ಜಾತಿಯ ಮನುಷ್ಯರಿಗಿಂತ ಪ್ರಾಣಿಗಳೇ ಮುಖ್ಯ ಮತ್ತು ಶ್ರೇಷ್ಠವಾಗಿ ಕಾಣುವುದು ಅವರಲ್ಲಿರುವ ಕೊಳಕು ಜಾತಿ ಪಧ್ಧತಿಯ ಅನುಷ್ಠಾನದ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.
ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆಯವರ ಈ " ಗೋ ರುದ್ರಭೂಮಿಯ " ಸಂಕಲ್ಪ ದ ಮರ್ಮವನ್ನು ಇಡೀ ಜಿಲ್ಲೆಯ ದಲಿತರು ಅರ್ಥ ಮಾಡಿಕೊಳ್ಳಬೇಕು. ತಮ್ಮದೇ ಕಾಪು ಕ್ಷೇತ್ರದ ಉಚ್ಚಿಲದ ಹಿಂದು ರುದ್ರಭೂಮಿಯಲ್ಲಿ ದಲಿತರ ಶವ ಸುಡಲು ಅವಕಾಶ ಕೊಡದಾಗ ಸೊಲ್ಲೆತ್ತದ ಈ ಬಿಜೆಪಿಯವರ ಹಿಡನ್ ಅಜೆಂಡಾವನ್ನು ಉಡುಪಿ ಜಿಲ್ಲೆಯ ಸಮಸ್ತ ದಲಿತರು ಅರ್ಥೈಸಿಕೊಂಡು ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಜಾತಿವಾದಿ ಪಕ್ಕದ ಅಭ್ಯರ್ಥಿಗಳು ಸೋಲಿಸುವ ಕೆಲಸ ಮಾಡಬೇಕು .ಮತ್ತು ಸಂವಿಧಾನದ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಬೇಕು ಎಂದು ಸುಂದರ ಮಾಸ್ಟರ್ ಕರೆಕೊಟ್ಟಿದ್ದಾರೆ.