‘ಸಂವಿಧಾನ ರಕ್ಷಣೆ ಮಾಡುವ ಪಕ್ಷಕ್ಕೆ ನಮ್ಮ ಬೆಂಬಲ': ದಲಿತ ಸಂಘಟನೆಗಳ ಒಕ್ಕೂಟದಿಂದ ಕಾಂಗ್ರೆಸ್ಗೆ ಬೆಂಬಲ ಪ್ರಕಟ

ಬೆಂಗಳೂರು, ಮೇ 6: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ರೂಪಿಸಿರುವ ಸಂವಿಧಾನ ಉಳಿಸುವ ಪಕ್ಷಕ್ಕೆ ನಮ್ಮ ಬೆಂಬಲ’ ಎಂದು ದಲಿತ ಸಂಘಟನೆಗಳ ಒಕ್ಕೂಟ, ಕರ್ನಾಟಕ ಸಮತಾ ಸೈನಿಕ ದಳ, ಎಸ್ಎಸ್ಡಿ ಮಹಿಳಾ ಘಟಕ, ದಸಂಸ ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ಪ್ರಕಟಿಸಿವೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಧರ್ಮಸೇನಾ ಉಪಸ್ಥಿತಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ, ಮಹಿಳಾ ಅಧ್ಯಕ್ಷೆ ಕಮಲಮ್ಮ, ಪದಾಧಿಕಾರಿಗಳಾದ ಕೃಷ್ಣಪ್ಪ, ಸ್ಪೇಕ್ಸ್ ನಾರಾಯಣಸ್ವಾಮಿ, ಮುರುಗೇಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸೇನಾ, ‘ರಾಜ್ಯದಲ್ಲಿ ಇಂದು ದಲಿತರೆಲ್ಲರೂ ಒಗ್ಗೂಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ದಲಿತರ ಏಳಿಗೆ, ಅಭಿವೃದ್ಧಿಗೆ ಕಂಟಕ, ಅಪಾಯ ಎದುರಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ದಲಿತರಿಗೆ ಚೈತನ್ಯ ತುಂಬಿದೆ. ಇನ್ನು ಡಾ.ಜಿ.ಪರಮೇಶ್ವರ್ ಅವರನ್ನು ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ. ಆ ಮೂಲಕ ದಲಿತರಿಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿ ಸಮುದಾಯಕ್ಕೆ ಶಕ್ತಿ ತುಂಬಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ 20 ಸಾವಿರಕ್ಕೂ ಹೆಚ್ಚು ಸಂಘಟನೆಗಳಿವೆ. ನಾನು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷನಾಗಿ ನೇಮಕಗೊಂಡ ನಂತರ ದಲಿತರ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯ ಮಟ್ಟದಲ್ಲಿ ಒಬ್ಬರೇ ಆದರೂ ಅವರನ್ನು ನಿರ್ಲಕ್ಷಿಸದೇ ದಲಿತ ಸಮುದಾಯದವರನ್ನು ಪಕ್ಷಕ್ಕೆ ಕರೆ ತರಬೇಕು ಎಂದು ನಮ್ಮ ಘಟಕದ ಎಲ್ಲ್ಲ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
‘ಒಂದು ವರ್ಷಗಳಿಂದ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ದಲಿತರಿಗಾಗಿ ಕಾಂಗ್ರೆಸ್ ಈಗಾಗಲೇ 10 ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಿದೆ. ಇದರ ಹೊರತಾಗಿ ದಲಿತರ ಸಮಸ್ಯೆ ಏನೇ ಇದ್ದರೂ ಅದನ್ನು ಬಗೆಹರಿಸಲು ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಂಘಟನೆಗಳ ಬೆಂಬಲದಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
‘ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇನ್ನು ಡಾ.ಪರಮೇಶ್ವರ್ ತಲೆಗೆ ಕಲ್ಲೇಟು ಬಿದ್ದಿದೆ. ಈ ದಾಳಿ ಯಾರಿಂದ ಆಗಿದೆ ಎಂದು ಪತ್ತೆಹಚ್ಚಲು ಸರಕಾರ ವಿಫಲವಾಗಿದೆ. ದೊಡ್ಡ ನಾಯಕರ ಪರಿಸ್ಥಿತಿ ಹೀಗಾದರೆ ಹಳ್ಳಿಗಳಲ್ಲಿರುವ ದಲಿತರ ಸ್ಥಿತಿ ಏನು, ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಖಂಡನೀಯ. ಈ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಈ ವಿಚಾರದಲ್ಲಿ ಸೂಕ್ತ ಕ್ರಮಕೈಗೊಂಡು ದಲಿತರ ರಕ್ಷಣೆ ಮಾಡಬೇಕು’
-ಧರ್ಮಸೇನಾ ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ