'ಕೆಲಸ ಮಾಡಿ ಮತ ಕೇಳಲಿ': ಮೋದಿ ರೋಡ್ ಶೋ ವಿರುದ್ಧ ಜನಾಕ್ರೋಶ
''ಬ್ಯಾರಿಕೇಡ್ ತೆಗೆಯುತ್ತೀರಾ ಅಥವಾ ನಾವೇ ಕಿತ್ತು ಹಾಕಿ ಹೊಗಬೇಕಾ?''

ಬೆಂಗಳೂರು, ಮೇ 6: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮತದಾರರ ಮನಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ 26 ಕಿ.ಮೀ.ಗಳ ರೋಡ್ ಶೋ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆ.ಪಿ.ನಗರದ ಸೋಮೇಶ್ವರ ಸಭಾ ಭವನದ ಬಳಿಯಿಂದ ಆರಂಭವಾದ ರೋಡ್ ಶೋ ಮಲ್ಲೇಶ್ವರ 18ನೆ ಅಡ್ಡ ರಸ್ತೆಯ ವರೆಗೆ ನಡೆಯಿತು. ಜಯನಗರದ ಬಳಿ ರೋಡ್ ಶೋಗಾಗಿ ನಗರದ ವಿವಿಧೆಡೆಗಳಲ್ಲಿ ರಸ್ತೆ ಸಂಪೂರ್ಣ ಮುಚ್ಚಿದ್ದರಿಂದ ಆಂಬ್ಯುಲೆನ್ಸ್ವೊಂದು ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು 34 ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಕೆಲವೆಡೆ ಬೆಳಗ್ಗೆ 8 ಗಂಟೆಯಿಂದಲೆ ಸಂಚಾರ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ರಸ್ತೆ ಮುಚ್ಚಿದ್ದರಿಂದ ಕಚೇರಿಗಳಿಗೆ ತೆರಳುತ್ತಿದ್ದವರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದದ್ದು ಕಂಡು ಬಂತು.
ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ ಮಧ್ಯೆ ಸಿಲುಕಿದ ಆ್ಯಂಬುಲೆನ್ಸ್; ಸಂಚಾರ ಅಸ್ತವ್ಯಸ್ತ: ವೀಡಿಯೊ ವೈರಲ್
ಯಾರೋ ಬಂದರೆ ‘ಜನರಿಗೆ ಯಾಕೆ ತೊಂದರೆ ಕೊಡುತ್ತೀರಾ. ರಸ್ತೆಗಳನ್ನು ಮುಚ್ಚಿಟ್ಟರೆ ನಾವು ಹೇಗೆ ನಮ್ಮ ಕೆಲಸಗಳಿಗೆ ಹೋಗಬೇಕು. ನೀವಾಗಿಯೆ ಬ್ಯಾರಿಕೇಡ್ ತೆಗೆಯುತ್ತೀರಾ ಅಥವಾ ನಾವೇ ಕಿತ್ತು ಹಾಕಿ ಹೊಗಬೇಕಾ?’ ಎಂದು ಸಾರ್ವಜನಿಕರು ಪೊಲೀಸರ ಮೇಲೆ ಗರಂ ಆದರು. ಈ ವೇಳೆ ಕೆಲವು ಕಡೆ ಸಾರ್ವಜನಿಕರು ಸಂಚರಿಸಲು ಅವಕಾಶ ಕಲ್ಪಿಸಲಾಯಿತು.
ರೋಡ್ ಶೋ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೆ ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದರು. ಶಿವಕುಮಾರ ಸ್ವಾಮೀಜಿ ನಿಧನ ಹೊಂದಿದಾಗ ಬಂದಿಲ್ಲ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾಗ ಬಂದಿಲ್ಲ, ಮಂಗಳೂರಿನಲ್ಲಿ ಭೂ ಕುಸಿತವಾದಾಗ ಬಂದಿಲ್ಲ, ರಾಜ್ಯ ಬಿಜೆಪಿ ಸರಕಾರ 40 ಪರ್ಸೆಂಟ್ ಲೂಟಿ ಮಾಡುತ್ತಿದ್ದಾಗ ಬಂದಿಲ್ಲ. ಈಗ ಚುನಾವಣೆಗಾಗಿ ಬಂದಿದ್ದಾರೆ ಎಂದು ಕಿಡಿಗಾರಿದರು.
ಕೆಲಸ ಮಾಡಿ ಮತ ಕೇಳಲಿ, ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸಿ ಒಂದು ಟ್ವೀಟ್ ಮಾಡಿಲ್ಲ, ಒಂದು ಪತ್ರಿಕಾಗೋಷ್ಠಿ ಮಾಡಿಲ್ಲ. ಮನ್ ಕಿ ಬಾತ್ ಹೇಳಿಕೊಂಡು ಕೂತಿದ್ದಾರೆ. ರೋಡ್ ಶೋ ಮಾಡಿ ಮತ ಪಡೆಯಬೇಕಾ? ನಾಟಕ ಮಾಡಬೇಡಿ, ಕೆಲಸ ಮಾಡಿ ಮತ ಕೇಳಿ ಎಂದು ಜಯಶ್ರೀ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಯಶ್ರೀ ಅವರ ಸುತ್ತಲೂ ಬಿಜೆಪಿ ಕಾರ್ಯಕರ್ತರ ಗುಂಪು ಸೇರಿಕೊಂಡು ‘ಮೋದಿ, ಮೋದಿ’, ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಆದರೂ, ವಿಚಲಿತರಾಗದ ಜಯಶ್ರೀ ನಾನು ಹಿಂದೂ ಎಂದು ತಿರುಗೇಟು ನೀಡಿದರು.
ರಸ್ತೆಗಳು ಮುಚ್ಚಿದ್ದಾರೆ. ಪರ್ಯಾಯ ಮಾರ್ಗ ಸೂಚಿಸಿಲ್ಲ. ನಾವು ಕಚೇರಿಗಳಿಗೆ ಹೋಗಲು ಆಗುತ್ತಿಲ್ಲ. ಇವರು ಬಂದ್ ರೋಡ್ ಶೋ ಮಾಡಿ ಹೋಗುತ್ತಾರೆ. ಚುನಾವಣೆ ಮುಗಿದ ಬಳಿಕ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ನಮ್ಮ ಕಷ್ಟಗಳನ್ನು ಯಾರ ಬಳಿ ಹೋಗಿ ಹೇಳೋಣ. ಆಸ್ಪತ್ರೆಗಳಿಗೆ, ಕಚೇರಿಗಳಿಗೆ ಹೋಗುವವರು ಇರುತ್ತಾರೆ ಅವರಿಗೆಲ್ಲ ಎಷ್ಟು ಕಷ್ಟ ಆಗುತ್ತಿದೆ ನೋಡಿ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಎಲ್ಲೋ ಒಂದು ಕಡೆ ಪ್ರಧಾನಿ ಬಂದರೆ, ಇಡೀ ಬೆಂಗಳೂರು ಸ್ಥಗಿತವಾಗುವಂತೆ ಮಾಡಿದ್ದಾರೆ. ಕಚೇರಿಗಳಿಗೆ 10 ನಿಮಿಷ ತಡವಾಗಿ ಹೋದರೂ, ಅರ್ಧ ದಿನದ ಸಂಬಳ ಕಡಿತ ಮಾಡುತ್ತಾರೆ. ಪ್ರಮುಖ ರಸ್ತೆಗಳೆಲ್ಲ ಮುಚ್ಚಿರುವುದರಿಂದ ನಾವು ಹೇಗೆ ನಮ್ಮ ಕೆಲಸದ ಸ್ಥಳಗಳಿಗೆ ತಲುಪಬೇಕು ಎಂಬುದು ಗೊತ್ತಾಗುತ್ತಿಲ್ಲ. ಬೆಳಗ್ಗೆಯಿಂದ ಇದೇ ಭಾಗದಲ್ಲಿ ಸುತ್ತುಗಳನ್ನು ಹಾಕುತ್ತಿದ್ದೇವೆ. ಆದರೆ, ಹೊರಗಡೆ ಹೋಗಲು ಆಗುತ್ತಿಲ್ಲ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.
ಬೆಳಗ್ಗೆ 8 ಗಂಟೆಯಿಂದ ಕಾಯುತ್ತಿದ್ದೇವೆ. ಪ್ರಧಾನಿ ಬರೋದು 11 ಗಂಟೆಗೆ ಅಂತೆ. ಅವರು ಬರುವ ಅರ್ಧ ಗಂಟೆ ಮುಂಚಿತವಾಗಿ ರಸ್ತೆ ಮುಚ್ಚಿದರೆ ಸಾಕು. ಕಾಲೇಜು, ಆಸ್ಪತ್ರೆಗೆ ಹೋಗುವವರು ಏನು ಮಾಡಬೇಕು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗುತ್ತಿಲ್ಲ. ಚುನಾವಣಾ ಪ್ರಚಾರವೆ ಮಾಡಬೇಕಾದರೆ ಯಾವುದಾದರೂ ದೊಡ್ಡ ಮೈದಾನಗಳಲ್ಲಿ ಸಭೆ, ಸಮಾರಂಭಗಳನ್ನು ಮಾಡಿ ಭಾಷಣ ಮಾಡಲಿ ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಬಂದು ರೋಡ್ ಶೋ ಮಾಡುವ ಅಗತ್ಯವೇನಿದೆ? ನಾನು ವಿದ್ಯಾವಂತನೇ, ಆದರೆ ಇಂತಹವರ ವರ್ತನೆ ನೋಡಿದರೆ ಇವರಿಗೆ ಯಾಕೆ ಮತ ನೀಡಬೇಕು ಎಂದು ಆಲೋಚನೆ ಮಾಡುವಂತಾಗಿದೆ. ನ್ಯಾಷನಲ್ ಕಾಲೇಜು ಮೈದಾನ ಅಥವಾ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋಗಿ ಸಭೆಗಳನ್ನು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.
1947ರಿಂದ ಈವರೆಗೆ ಯಾವ ಪ್ರಧಾನಿಯೂ ಇಷ್ಟೊಂದು ಬಾರಿ ಚುನಾವಣೆಗಾಗಿ ಬೆಂಗಳೂರಿಗೆ ಬಂದಿದ್ದನ್ನು ನಾವು ಕಂಡಿಲ್ಲ. ಅವರು ಒಂದು ಬಾರಿ ರಾಜ್ಯಕ್ಕೆ ಬಂದು ಹೋದರೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಅದನ್ನೆಲ್ಲ ಎಲ್ಲಿಂದ ಭರಿಸುತ್ತಾರೆ. ಯಾವ ಪ್ರಧಾನಿ ಮಾಡದಷ್ಟು ಖರ್ಚು ಇವರು ಮಾಡುತ್ತಿದ್ದಾರೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.
.jpg)
.jpg)
.jpg)