ಕೊಲ್ಲುವ ಮನಸ್ಥಿತಿಯ ವ್ಯಕ್ತಿ ಉಡುಪಿ ಶಾಸಕನಾಗಬಾರದು: ಸುಧೀರ್ ಕುಮಾರ್ ಮುರೋಳಿ

ಉಡುಪಿ, ಮೇ 6: ಕೊಲ್ಲುವ ಮನಸ್ಥಿತಿಯ ಹಾಗೂ 9 ಪುಟಗಳ ಕ್ರಿಮಿನಲ್ ಕೇಸುಗಳ ವರದಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ ಉಡುಪಿಯ ಶಾಸಕನಾಗುತ್ತಾ ನೆಂದರೆ ಅದು ಉಡುಪಿಯ ಸ್ವಾಭಿಮಾನದ ಪ್ರಶ್ನೆ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೋಳಿ ಟೀಕಿಸಿದ್ದಾರೆ.
ಪರ್ಕಳದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಕಾಂಗ್ರೆಸ್ ರ್ಯಾಲಿ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿಗೆ ನೂರು ಜನ್ಮ ಎತ್ತಿ ಬಂದರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಕ್ಷೀರ ಭಾಗ್ಯ, ಅನ್ನ ಭಾಗ್ಯ, ಲ್ಯಾಪ್ಟಾಪ್, ಶೂ ಭಾಗ್ಯ, ಮನಸ್ವಿನಿ ಮುಂತಾದ 167 ಭರವಸೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈಡೇರಿಸಿದೆ ಎಂದರು.
ಮನೆ, ಸಾಲಮನ್ನಾ ಮಾಡಿದ್ದು ಕಾಂಗ್ರೆಸ್ ಸರಕಾರ. ಉದ್ಯೋಗ ಕೊಡಿ ಅಂದರೆ ಬಿಜೆಪಿಗರು ಜಟ್ಕಾ-ಹಲಾಲ್ ಕಟ್, ಹಿಜಾಬ್-ಅಝಾನ್ ಎನ್ನುತ್ತಾರೆ. ಗೋವಾದಲ್ಲಿ ಬಿಜೆಪಿ ಸರಕಾರ ಶ್ರೀರಾಮ ಸೇನೆಯನ್ನು ನಿಷೇಧಿಸಿತ್ತು. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು ಎಂದು ಅವರು ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ನೀರಿಲ್ಲ, ಉದ್ಯೋಗವಿಲ್ಲ, ಒಳಚರಂಡಿ ಆಗಿಲ್ಲ ಎಂದು ಜನರು ಅಳುತಿದ್ದಾರೆ. ಇದೆಲ್ಲದಕ್ಕೂ ಪರಿಹಾರವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ವರ್ಷದಲ್ಲಿ ಸುಮಾರು 27,000 ಯುವಕರು ಪದವಿ ಮುಗಿಸಿ ಹೊರಬರು ತ್ತಾರೆ. ಯುವಕರ ಉದ್ಯೋಗಕ್ಕಾಗಿ ಯಾವುದೇ ಒಂದು ಕೈಗಾರಿಕೆಯನ್ನು ಬಿಜೆಪಿ ಸರಕಾರ ಸ್ಥಾಪಿಸಿಲ್ಲ. ಆದುದರಿಂದ ಈ ಭೃಷ್ಟ ಸರಕಾರವನ್ನು ಸೋಲಿಸಬೇಕು. ಪ್ರವಾಸೋದ್ಯಮದಲ್ಲಿ ಕಮಿಷನ್ ಏಜೆಂಟರಂತೆ ಬಿಜೆಪಿ ವರ್ತಿಸುತ್ತಿದೆ. ಬಿಜೆಪಿ ಮೀನುಗಾರಿಕಾ ಜಟ್ಟಿಯನ್ನು ಅಭಿವೃದ್ಧಿ ಪಡಿಸಿಲ್ಲ. ನಾಡದೋಣಿಗೆ ಸೀಮೆ ಎಣ್ಣೆ ನೀಡಲಿಲ್ಲ. ಕೃಷಿಕರಿಗೂ ಬಿಜೆಪಿ ಯಾವುದೇ ಉತ್ತೇಜನ ನೀಡಿಲ್ಲ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸುಕೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.







