ಕಾಂಗ್ರೆಸ್ ಗೆಲ್ಲಿಸಿದರೆ ಜನಪರ ಯೋಜನೆಗಳು ಜಾರಿಯಾಗಲಿವೆ: ವಿಜಯಪುರದಲ್ಲಿ ಎಂ. ಬಿ. ಪಾಟೀಲ್ ಪರ ನಟಿ ರಮ್ಯಾ ರೋಡ್ ಶೋ

ವಿಜಯಪುರ, 6: ಬಸವಣ್ಣನವರ ಕಾಯಕ ತತ್ವದಡಿ ಜನಸೇವೆ ಮಾಡುತ್ತಿರುವ ಎಂ. ಬಿ. ಪಾಟೀಲರು ಕರ್ನಾಟಕದ ಆಸ್ತಿಯಾಗಿದ್ದಾರೆ ಎಂದು ಖ್ಯಾತ ಚಲನಚಿತ್ರ ನಟಿ ರಮ್ಯಾ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಜಾಲಗೇರಿ, ಜಾಲಗೇರಿ ಎಲ್.ಟಿ.1, ತಿಕೋಟಾ, ನಿಡೋಣಿ, ಬಬಲೇಶ್ವರಗಳಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ರೋಡ್ ಶೋ ಕಾರ್ನರ್ ಮಿಟಿಂಗ್ನಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೊಗಸೆ ನೀರನ್ನು ಕೇಳಿದರು. ಆದರೆ, ಎಂ. ಬಿ. ಪಾಟೀಲರು ಹೊಳೆಯನ್ನು ಈ ಕಡೆ ಹರಿಸಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಜನರ ಜೀವನ ಮಟ್ಟವನ್ನು ಶಾಶ್ವತವಾಗಿ ಸುದಾರಿಸಿದ್ದಾರೆ. ಇಂಥ ನಾಯಕರನ್ನು ಆಶೀರ್ವದಿಸಿ ಗೆಲ್ಲಿಸಿದರೆ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ. ಇಡೀ ನಾಡಿಗೆ ಒಳ್ಳೆಯದಾಗಲಿದೆ ಎಂದು ಹೇಳಿದರು.
ನಾನು ತಂದೆಯನ್ನು ಕಳೆದುಕೊಂಡಾಗ ಮಂಡ್ಯಕ್ಕೆ ಬಂದಿದ್ದ ಎಂ. ಬಿ. ಪಾಟೀಲರು ನೈತಿಕವಾಗಿ ಧೈರ್ಯ ತುಂಬಿದ್ದರು. ಅಲ್ಲದೇ ಚುನಾವಣೆಯಲ್ಲಿ ನಾನು ಸಂಸತ್ ಸದಸ್ಯೆಯಾಗಲು ಸಹರಿಸಿದ್ದಾರೆ. ಅಷ್ಟೇ ಅಲ್ಲ, ಇಡೀ ನಾಡಿನಾದ್ಯಂತ ಕೆಲಸ ಮಾಡಿ ವಿಜಯಪುರ ಜಿಲ್ಲೆಗೆ ಕೀರ್ತಿ ಮತ್ತು ಹೆಸರನ್ನು ತಂದಿದ್ದಾರೆ. ಜಿಲ್ಲೆ ಮತ್ತು ರಾಜ್ಯಕ್ಕೆ ಅವರ ಸೇವೆ ಅಗತ್ಯವಾಗಿದೆ. ಅವರನ್ನು ಎಲ್ಲರೂ ಬೆಂಬಲಿಸಿ ಗೆಲ್ಲಿಸಬೇಕು. ಈ ಬಾರಿ ಕಾಂಗ್ರೆಸ್ನ್ನು ಗೆಲ್ಲಿಸಿದರೆ ಜನರ ಪರ ಯೋಜನೆಗಳು ಜಾರಿಯಾಗಲಿವೆ ಎಂದು ಹೇಳಿದರು.
ತಿಕೋಟಾದಲ್ಲಿ ಮಾತನಾಡಿದ ಆಶಾ ಎಂ. ಪಾಟೀಲ, ಎಂ. ಬಿ. ಪಾಟೀಲರ ಮೇಲೆ ತಾವೆಲ್ಲರೂ ಇಟ್ಟಿರುವ ಅಭಿಮಾನವನ್ನು ಉಳಿಸಿ ಬೆಳೆಸಬೇಕು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಈ ಮೂಲಕ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ರಾಜುಗೌಡ ಪೋಲೀಸ್ ಪಾಟೀಲ, ಭಾಗೀರಥಿ ತೇಲಿ, ಗೀತಾಂಜಲಿ ಪಾಟೀಲ, ಪ್ರತಿಭಾ ಪಾಟೀಲ, ವಿದ್ಯಾರಾಣಿ ತುಂಗಳ, ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ.ಎಸ್.ಪಾಟೀಲ, ಈರನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.






.jpeg)
.jpeg)


