ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಶಿ ತರೂರ್ ಆಗ್ರಹ
ಹೊಸದಿಲ್ಲಿ: ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಣಿಪುರ ಮತದಾರರು ಕೇವಲ ಒಂದೇ ವರ್ಷದಲ್ಲಿ ತೀವ್ರ ವಿಶ್ವಾಸ ದ್ರೋಹಕ್ಕೆ ಗುರಿಯಾದ ಭಾವನೆಯನ್ನು ಅನುಭವಿಸುತ್ತಿದ್ದು, ಹಿಂಸಾಚಾರಪೀಡಿತ ಮಣಿಪುರ ರಾಜ್ಯದ ಮೇಲೆ ಕೂಡಲೇ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, "ಮಣಿಪುರ ಹಿಂಸಾಚಾರ ಮುಂದುವರಿದಿದ್ದು, ಉತ್ತಮ ಆಡಳಿತದ ಭರವಸೆ ಹೊಂದಿದ್ದ ಪ್ರತಿಯೊಬ್ಬ ಬಲಪಂಥೀಯ ಭಾರತೀಯನೂ ಈಗೇನಾಯಿತು ಎಂದು ಪ್ರಶ್ನಿಸಿಕೊಳ್ಳಬೇಕಿದೆ" ಎಂದು ಕಿವಿಮಾತು ಹೇಳಿದ್ದಾರೆ.
"ಮಣಿಪುರ ರಾಜ್ಯದ ಮತದಾರರು ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ತಾವು ತೀವ್ರ ವಿಶ್ವಾಸ ದ್ರೋಹಕ್ಕೆ ಈಡಾಗಿರುವ ಭಾವನೆಯನ್ನು ಅನುಭವಿಸುತ್ತಿದ್ದಾರೆ. ರಾಷ್ಟ್ರಪತಿ ಆಡಳಿತ ಹೇರಲು ಇದು ಸಕಾಲ. ತನ್ನನ್ನು ಯಾವುದಕ್ಕಾಗಿ ಚುನಾಯಿಸಲಾಗಿತ್ತೊ ಅದನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ" ಎಂದು ಆರೋಪಿಸಿದ್ದಾರೆ.
ಮಣಿಪುರ ರಾಜ್ಯದ ಬಹುಸಂಖ್ಯಾತ ಮೇಯ್ಟಿ ಸಮುದಾಯವು ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವುದನ್ನು ವಿರೋಧಿಸಿ ಗುಡ್ಡಗಾಡು ರಾಜ್ಯವಾದ ಮಣಿಪುರದ 10 ಜಿಲ್ಲೆಗಳಲ್ಲಿ ಪ್ರತಿಭಟನೆ ಸ್ಫೋಟಗೊಂಡಿತ್ತು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಈವರೆಗೆ 54 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
As the Manipur violence persists, all right-thinking Indians must ask themselves what happened to the much-vaunted good governance we had been promised. The voters of Manipur are feeling grossly betrayed just a year after putting the BJP in power in their state. It’s time for…
— Shashi Tharoor (@ShashiTharoor) May 7, 2023