ಕಾಂಗ್ರೆಸ್ ನಂತೆ ಸುಳ್ಳು ಗ್ಯಾರಂಟಿಯನ್ನು ಬಿಜೆಪಿ ಕೊಡಲ್ಲ: ಪ್ರಧಾನಿ ಮೋದಿ

ಶಿವಮೊಗ್ಗ: ಕಾಂಗ್ರೆಸ್ ರೀತಿ ಸುಳ್ಳು ಗ್ಯಾರಂಟಿಯನ್ನು ಬಿಜೆಪಿ ಕೊಡಲ್ಲ. ಬಿಜೆಪಿ ಅಭಿವೃದ್ಧಿ ಗ್ಯಾರಂಟಿಯನ್ನು ಜನರಿಗೆ ಕೊಡುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಯನೂರಿನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ದಶಕಗಳ ಕಾಲ ಹಿಂದೆ ಕೊಂಡೋಯ್ದಿತ್ತು. 80% ಕಮಿಷನ್ ಪಡೆಯುವ ಕಾಂಗ್ರೆಸ್ ನಿಂದ ಏನು ಮಾಡಲು ಸಾಧ್ಯ. ರಾಜ್ಯದ ಹೊಸ ಮತದಾರರಿಗೆ ಕೇಳಲು ಬಯಸುತ್ತೇನೆ.ಯುವಕರ ಭವಿಷ್ಯವನ್ನು ಕಾಂಗ್ರೆಸ್ ನಿಂದ ರೂಪಿಸಲು ಸಾಧ್ಯವೇ.ಈ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಂಗ್ರೆಸ್ ಮಾಡಲು ಸಾಧ್ಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ದೇಶದ ಯುವಕರ ಬಗ್ಗೆ ಕಾಂಗ್ರೆಸ್ ಯಾವತ್ತು ಯೋಚಿಸಿಲ್ಲ. ಕಳೆದ 9 ವರ್ಷದಲ್ಲಿ 300 ಕ್ಕೂ ಅಧಿಕ ಮೆಡಿಕಲ್ ಕಾಲೇಜು ಬಿಜೆಪಿ ನಿರ್ಮಾಣ ಮಾಡಿದೆ ಎಂದು ಹೇಳಿದರು.
ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಒಂದೇ ರೀತಿ ಕೇಳಿ ಬರುತ್ತಿದೆ.ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದ ಅವರು,ಪ್ರಧಾನಿಯಾಗಿದ್ದಾಗ ಯಡಿಯೂರಪ್ಪನವರು ಹೇಳಿದ ಎಲ್ಲಾ ಕೆಲಸ ಮಾಡಿದ್ದೇನೆ.ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣ ನೀಡಿದ್ದೇವೆ.ರೈತರ ಆದಾಯ ದ್ವಿಗುಣ ಮಾಡುವ ಕೆಲಸ ಸರ್ಕಾರ ಮಾಡಿದೆ ಎಂದರು.
ವಿದೇಶಿ ಅಡಿಕೆ ಆಮದು ಬೆಲೆಯನ್ನು ಹೆಚ್ಚಳ ಮಾಡಿದ್ದೇವೆ.ಇದರಿಂದ ರಾಜ್ಯದ ರೈತರಿಗೆ ಅನುಕೂಲ ಆಗಿದೆ.ರೈತರ ಉತ್ಪನ್ನಗಳನ್ನು ರಪ್ತು ಮಾಡಲು ಸಹ ಕ್ರಮ ಕೈಗೊಂಡಿದ್ದೇವೆ ಎಂದರು
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ,ನಮ್ಮ ಸೌಭಾಗ್ಯ ಇಂದು ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಬಂದು ಆಶೀರ್ವಾದ ಮಾಡುತ್ತಿದ್ದಾರೆ.ನಾವು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಕೆಲಸ ಮಾಡಿದ್ದೇನೆ.ಮೋದಿಯವರು ನನ್ನ ಜನ್ಮ ದಿನದಂದೇ ಶಿವಮೊಗ್ಗ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ.ಡೈನಮಿಕ್ ಲೀಡರ್ ಶೀಪ್ನಿಂದಾಗಿ ಈ ಬಾರಿ ಬಿಜೆಪಿ ಬಹುಮತ ಪಡೆಯಲಿದೆ.ರಾಜ್ಯದ ಜನರ ನಾಡಿ ಮಿಡಿತ ಗೊತ್ತಿದೆ. ರಾಜ್ಯದಲ್ಲಿ 125 ರಿಂದ 130 ಸ್ಥಾನ ಗೆಲ್ಲಲಿದ್ದೇವೆ ಎಂದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ಜನರ ಮುಂದೆ ಹೋಗುತ್ತೇವೆ.ಅವರ ನಾಯಕತ್ವದಲ್ಲಿ ಸಂಘಟನೆ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದರು.
ಈಗಿನ ಕಾಂಗ್ರೆಸ್ ಗೆ ರಾಷ್ಟ್ರಭಕ್ತಿ ಗೊತ್ತಿಲ್ಲ.. ಕೇವಲ ಜಾತಿವಾದ ಮಾತ್ರ.ಡಿಕೆ ಶಿವಕುಮಾರ್ ಜಾತಿ ಹೆಸರು ಹೇಳಿ ಸಿಎಂ ಆಗ್ತಿನಿ ಅಂತಾರೇ.ಬಿಜೆಪಿಗೆ ಕೋಮುವಾದಿ ಅಂತಾರೆ.ಆ ಕೆಲಸವನ್ನು ಅವರೇ ಮಾಡುತ್ತಿದ್ದಾರೆ ಎಂದ ಅವರು,ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಮಾಡ್ತೀವಿ ಅಂದಿದ್ದಾರೆ.ಭಜರಂಗದಳ ಮುಟ್ಟಿ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಧೂಳಿಪಟ ಆಗುತ್ತೇ..ವಿಪಕ್ಷ ನಾಯಕ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತೆ.ಜಿಲ್ಲೆಯ 7 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ,ಕುಮಾರ್ ಬಂಗಾರಪ್ಪ, ಕೆ
ಬಿ ಆಶೋಕ್ ನಾಯ್ಕ್ ,ಬಿಜೆಪಿ ಅಭ್ಯರ್ಥಿ ಎಸ್.ಎನ್ ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಆಂಜನೇಯ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು.
ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ಅವರಿಗೆ ಉಡುಗೊರೆ ನೀಡಿದರು.