INS ಯುದ್ಧ ನೌಕೆಯೇ ಢಿಕ್ಕಿ ಹೊಡೆದು ಸುವರ್ಣ ತ್ರಿಭುಜ ಅವಘಡ ಸಂಭವಿಸಿದೆ: ಗಂಗಾಧರ ಸಾಲ್ಯಾನ್
ಮತ್ತೆ ಮುನ್ನೆಲೆಗೆ ಬಂದ ಉಡುಪಿ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ದುರಂತ

►ಮೃತ ಮೀನುಗಾರ ದಾಮೋದರ್ ಸಹೋದರನ ವಿಡಿಯೋ ವೈರಲ್
ಉಡುಪಿ: ಐದು ವರ್ಷಗಳ ಹಿಂದೆ ದೇಶಾದ್ಯಂತ ಭಾರೀ ಆತಂಕ ಸೃಷ್ಠಿಸಿದ್ದ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ಸಮುದ್ರಪಾಲಾದ ದುರಂತ ಘಟನೆಯ ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ಸಂಬಂಧ ದುರಂತದಲ್ಲಿ ಮೃತಪಟ್ಟ ಮೀನುಗಾರ ದಾಮೋದರ್ ಸಾಲ್ಯಾನ್ ಅವರ ಸಹೋದರ ಗಂಗಾಧರ ಸಾಲ್ಯಾನ್ ಅವರ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಮಲ್ಪೆ ಬಡಾನಿಡಿಯೂರು ಚಂದ್ರಶೇಖರ್ ಕೋಟ್ಯಾನ್ ಮಾಲಕತ್ವದ ಸುವರ್ಣ ತ್ರಿಭುಜ ಬೋಟಿನಲ್ಲಿ ಚಂದ್ರಶೇಖರ್ ಕೋಟ್ಯಾನ್, ಬಡಾನಿಡಿಯೂರಿನ ದಾಮೋದರ ಸಾಲ್ಯಾನ್, ಕುಮಟಾದ ಲಕ್ಷ್ಮಣ ಹರಿಕಂತ್ರ, ಸತೀಶ್ ಹರಿಕಂತ್ರ, ಹೊನ್ನಾವರದ ರವಿ ಮಂಕಿ, ಭಟ್ಕಳದ ಹರೀಶ್, ರಮೇಶ್ ಎಂಬವರು 2018ರ ಡಿ.13ರಂದು ರಾತ್ರಿ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದು, ಡಿ.15ರಂದು ರಾತ್ರಿ ಸಂಪರ್ಕ ಕಡಿದುಕೊಂಡ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿತ್ತು. ಈ ಬಗ್ಗೆ ಇತರ ಬೋಟಿನವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಡಿ.22ರಂದು ಚಂದ್ರಶೇಖರ್ ಕೋಟ್ಯಾನ್ರ ಸಹೋದರ ನಿತ್ಯಾನಂದ ಕೋಟ್ಯಾನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
(ಗಂಗಾಧರ್ ಸಾಲ್ಯಾನ್- ಮೃತ ಮೀನುಗಾರ ದಾಮೋದರ್ ಸಹೋದರ)
‘ಸುವರ್ಣ ತ್ರಿಭುಜ ಬೋಟು ಪ್ರತಿಯೊಬ್ಬರು ನಾಪತ್ತೆ, ಕಣ್ಮರೆ ಎಂದೇ ಹೇಳುತ್ತಿದ್ದಾರೆ. ಅದರ ಅಸಲಿ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಐಎನ್ಎಸ್ ಕೊಚ್ಚಿ ಯುದ್ಧ ನೌಕೆಯೇ ನೇರವಾಗಿ ಸುವರ್ಣ ತ್ರಿಭುಜ ಬೋಟಿಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿರುವುದಾಗಿದೆ. ಬೆಳಗಿನ ಜಾವ 5.30ರ ಸುಮಾರಿಗೆ ಈ ದುರಂತ ಸಂಭವಿಸಿದರೆ, ಬೆಳಗ್ಗೆ 8.30ರವರೆಗೆ ಆ ಯುದ್ಧ ನೌಕೆ ಅಲ್ಲೇ ಇತ್ತು. ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಎಷ್ಟು ಮಂದಿಯನ್ನು ಈ ನೌಕಾಪಡೆಯವರು ಕಾಪಾಡಿದ್ದಾರೆ ಮತ್ತು ಎಷ್ಟು ಮಂದಿ ಸತ್ತಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ ಎಂದು ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಗಂಗಾಧರ ಸಾಲ್ಯಾನ್ ತಮ್ಮ ವಿಡಿಯೋದಲ್ಲಿ ಹೇಳಿ ಕೊಂಡಿದ್ದಾರೆ.
ವಿಡಿಯೋದಲ್ಲಿ ಹೇಳಿರುವ ಸಂಪೂರ್ಣ ಮಾತುಗಳು
‘ದುರಂತ ಸಂಭವಿಸಿದ ಎರಡು ದಿನಗಳ ಬಳಿಕ ನಮಗೆ ಸುವರ್ಣ ತ್ರಿಭುಜ ಬೋಟು ನಾಪತ್ತೆ ಆಗಿರುವ ಬಗ್ಗೆ ಮಾಹಿತಿ ಬಂತು. ಅಲ್ಲಿಂದ ಹುಡುಕಾಟ ನಡೆಸಲು ಆರಂಭಿಸಿದೆವು. ಇದರ ವಿರುದ್ಧ ಉಡುಪಿಯಲ್ಲಿ ಕರಾವಳಿ ಮೀನುಗಾರರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಹಡಗು, ಹೆಲಿಕಾಫ್ಟರ್ ಗಳಲ್ಲಿ ಹುಡುಕಾಟ ನಡೆಸುತ್ತಿರುವುದಾಗಿ ಸರಕಾರ ತಿಳಿಸಿತು. ಆದರೆ ಎಲ್ಲಿಯೂ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಹೇಳಿದರು’
‘ಸುವರ್ಣ ತ್ರಿಭುಜ ಬೋಟು ಅಪಘಾತಕ್ಕೆ ಒಳಗಾಗಿ ಮುಳುಗಡೆಯಾಗಿರುವುದಕ್ಕೆ ಬೋಟಿನ ಕಂಟೈನರ್ ಮತ್ತು ಸಿಂಟೆಕ್ಸ್ನ ಕುರುಹುಗಳು ಸಮುದ್ರ ಮಧ್ಯೆ ದೊರೆತವು. ಈ ಸೊತ್ತುಗಳು ಸಿಕ್ಕಿದವರು, ಬೋಟು ಅವಘಡ ಆಗಿರುವುದು ಹೌದು ಮತ್ತು ಅಲ್ಲಿ ಕೊಚ್ಚಿನ್ ಶಿಪ್ ಇರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದರು. ಈ ಬಗ್ಗೆ ಪ್ರಕರಣ ಕೂಡ ದಾಖಲಾಯಿತು. ಆಗಿನ ಪೊಲೀಸ್ ಅಧೀಕ್ಷಕರು, ಕೊಚ್ಚಿನ್ ಶಿಪ್ನ ರೂಟ್ ಮ್ಯಾಪ್ಗಳನ್ನು ಕೂಡ ಪಡೆದುಕೊಂಡು ಪರಿಶೀಲಿಸಿದಾಗ ಕೊಚ್ಚಿನ್ ಶಿಪ್ ಮತ್ತು ಸುವರ್ಣ ತ್ರಿಭುಜ ಬೋಟಿನ ಸಮುದ್ರ ಮಾರ್ಗ ಒಂದೇ ಆಗಿರುವುದು ಕಂಡುಬಂತು’
‘ಈ ವಿಚಾರವಾಗಿ ಮೀನುಗಾರರ ತಂಡ ದೆಹಲಿಗೆ ತೆರಳಿ ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ರನ್ನು ಭೇಟಿ ಮಾಡಿತು. ಆಗ ಅವರು ಕೊಚ್ಚಿನ್ ಶಿಪ್ನ ಅಧಿಕಾರಿಗಳನ್ನು ಕರೆದು ಕೇಳಿದಾಗ ಅವರು, ನಮ್ಮ ಬೋಟು ಢಿಕ್ಕಿ ಹೊಡೆದೇ ಇಲ್ಲ ಎಂದು ವಾದ ಮಾಡಿದರು. ಬಳಿಕ ಸಚಿವರು ನಮಗೆ ಬೋಟು ಹುಡುಕಾಟ ನಡೆಸಲು ಅನುಮತಿ ನೀಡಿದರು. ಇದೆಲ್ಲವೂ ಆಗಿರುವುದು 2019ರ ಲೋಕಸಭಾ ಚುನಾವಣೆಗೆ ಒಂದು ತಿಂಗಳು ಮೊದಲು’
‘ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟನ್ನು ಹುಡುಕಲು ನಾನು ಸೇರಿದಂತೆ ಒಟ್ಟು ಎಂಟು ಮಂದಿ ನೌಕಾಪಡೆಯ ಹಡಗಿನಲ್ಲಿ ಹೊರಟಲು ಸಿದ್ಧರಾದೆವು. ಮೊದಲು ಶಿಪ್ನವರು ಹೇಳಿದ ಜಾಗದಲ್ಲಿ ಹುಡುಕಾಟ ನಡೆಸಿದವು. ಅವರು ಕೊಚ್ಚಿನ್ ಶಿಪ್ಗೆ ಬಂಡೆ ಢಿಕ್ಕಿ ಹೊಡೆದು ಹಾನಿಯಾಗಿರುವುದಾಗಿ ಹೇಳಿದ್ದರು. ಆದರೆ ಸಮುದ್ರ ಮಧ್ಯೆ ಬಂಡೆ ಇರುವುದು 65 ಮೀಟರ್ ಆಳದಲ್ಲಿ ಮತ್ತು ಶಿಪ್ ಇರುವುದು 2ಮೀಟರ್ ಕೆಳಗೆ. ಹಾಗಾಗಿ ಬಂಡೆ ಢಿಕ್ಕಿ ಹೊಡೆಯಲು ಸಾಧ್ಯವೇ ಇಲ್ಲ. ಇದು ಸುವರ್ಣ ತ್ರಿಭುಜ ಬೋಟಿಗೆ ಢಿಕ್ಕಿ ಹೊಡೆದೇ ಉಂಟಾಗಿರುವ ಹಾನಿ ಎಂಬುದು ನಮಗೆ ಮನವರಿಕೆಯಾಯಿತು. ಇವರು ನಮ್ಮನ್ನು ಮೂರ್ಖರನ್ನಾಗಿ ಮಾಡಲು ನೋಡಿದರು. ನಾವು ಕಡಲಿನ ಮಕ್ಕಳು ನಮಗೂ ಕಡಲಿನ ಬಗ್ಗೆ ಗೊತ್ತು’
‘ಅಲ್ಲಿ ಎಲ್ಲೂ ಪತ್ತೆಯಾಗದೆ ಇದ್ದಾಗ, ನಾನು ಜಿಪಿಎಸ್ ಪರಿಶೀಲನೆ ನಡೆಸಿ ಸೂಚಿಸಿ ಹೇಳಿದ ಸ್ಥಳದ ಆಳಕ್ಕೆ ಕ್ಯಾಮೆರಾ ಕಳುಹಿಸಿ ಹುಡುಕಿದಾಗ ಬೋಟು ಪತ್ತೆಯಾಯಿತು. 64 ಮೀಟರ್ ಕ್ಯಾಮೆರಾ ಆಳಕ್ಕೆ ಹೋಗಿತ್ತು. ಒಂದೂವರೆ ಗಂಟೆಗಳ ಸುವರ್ಣ ತ್ರಿಭುಜ ಬೋಟಿನ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲಿ ಸಂಪೂರ್ಣ ಚಿತ್ರಣ ಇದೆ. ಅದು ಕೇಂದ್ರ ಸರಕಾರದ ಮೂಲಕ ನೌಕಪಡೆಯ ಕೈಯಲ್ಲಿದೆ’
‘ಆ ವಿಡಿಯೋದಲ್ಲಿ ಬೋಟಿಗೆ ಎಲ್ಲಿ ಹಾನಿಯಾಗಿದೆ, ಅದರೊಳಗೆ ಮೃತದೇಹ ಇದೆಯೇ ಸೇರಿದಂತೆ ಎಲ್ಲ ಮಾಹಿತಿ ಕೂಡ ಇದೆ. ಆದರೆ ಅದನ್ನು ಎಲ್ಲೂ ಬಹಿರಂಗ ಪಡಿಸಲಿಲ್ಲ. ನಮಗೂ ತೋರಿಸದೆ ಮುಚ್ಚಿಟ್ಟರು. ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಚಿತ್ರೀಕರಣ ಸರಿಯಾಗಿ ಆಗಿಲ್ಲ ಎಂದು ಸುಳ್ಳು ಹೇಳಿದರು’
‘ನಂತರ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮೀನುಗಾರರ ನಿಯೋಗ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿತು. ಅವರು ನ್ಯಾಯ ಒದಗಿಸುವ ಆಶ್ವಾಸನೆ ಕೊಟ್ಟರು. ಆದರೆ ಅದರ ಬಗ್ಗೆ ಈವರೆಗೆ ಸುದ್ದಿ ಇಲ್ಲ. ಈಗ ಅವರು ಚುನಾವಣಾ ಪ್ರಚಾರದಲ್ಲಿ ಕರ್ನಾಟಕದಲ್ಲಿ ಇದ್ದಾರೆ. ಈಗಲೂ ಬೇಕಾದರೂ ಬಿಜೆಪಿಯವರಿಗೆ ಅವರಲ್ಲಿ ಬೋಟಿನ ಬಗ್ಗೆ ಕೇಳಬಹುದು. ಆದರೆ ಯಾರಿಗೂ ಬೇಕಾಗಿಲ್ಲ’
‘ಆಗ ಮೀನುಗಾರಿಕಾ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎಲ್ಲರಿಗೂ ಮನವಿ ಮಾಡಿದೆವು. ಯಾವುದೇ ಪ್ರಯೋಜನ ಆಗಿಲ್ಲ. ಕೇವಲ ಇನ್ಸೂರೆನ್ಸ್ಗಾಗಿ ಬೋಟಿನ ಫೋಟೋ ತೆಗೆದುಕೊಂಡು ಬಂದರೆ ಹೊರತು ಆ ಏಳು ಜೀವಗಳು ಏನಾದವು ಎಂಬುದು ಗೊತ್ತೆ ಆಗಲಿಲ್ಲ’
(ನಾಪತ್ತೆಯಾಗಿರುವ ಮೀನುಗಾರರು)
‘ಬೋಟು ದುರಂತದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಲಿ’
ವೈರಲ್ ಆಗಿರುವ ವಿಡಿಯೋ ಕುರಿತು ‘ವಾರ್ತಾಭಾರತಿ’ ಜೊತೆ ಮಾತನಾಡಿದ ಗಂಗಾಧರ ಸಾಲ್ಯಾನ್, ನಾನು ಸತ್ಯ ವಿಷಯವನ್ನು ಹೇಳುತ್ತಿದ್ದಾನೆ. ವಿಡಿಯೋದಲ್ಲಿ ಹೇಳಿರುವುದು 100ಕ್ಕೆ 100 ಸತ್ಯ. ಅದರಲ್ಲಿ ಯಾವುದೇ ಸುಳ್ಳು ವಿಷಯ ಇಲ್ಲ. ಇನ್ನು ಬೇಕಾದಷ್ಟು ವಿಷಯಗಳಿವೆ. ಅದಕ್ಕೆ ಬೇಕಾದ ದಾಖಲೆ ಕೂಡ ನಮ್ಮ ಬಳಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ಪರಿಹಾರಕ್ಕಿಂತ ಮುಖ್ಯವಾಗಿ ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ಮೋದಿಯವರಿಗೆ ಇಮೇಲ್ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಪ್ರತಿಯೊಬ್ಬರು ಈಜುಗಾರರೇ. ಆದುದರಿಂದ ದುರಂತ ಸಂಭವಿಸಿದ ಸಂದರ್ಭ ಒಬ್ಬರಾದರೂ ಬದುಕಿರುವ ಸಾಧ್ಯತೆಗಳಿರುತ್ತದೆ. ಬದುಕಿರುವವರನ್ನು ಬಿಟ್ಟರೆ ಇವರ ಜಾತಕ ಹೊರಗಡೆ ಬರಬಹುದು ಎಂಬ ಕಾರಣಕ್ಕೆ ಅವರನ್ನು ಕರೆದುಕೊಂಡು ಹೋಗಿ ಬಂಧನದಲ್ಲಿ ಇಟ್ಟಿರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಆಗ ಮಾಡಿರುವ ಅಂಡರ್ ವಾಟರ್ ವಿಡಿಯೋ ವನ್ನು ಬಿಡುಗಡೆ ಮಾಡಿ, ಬೋಟಿನೊಳಗೆ ಎಷ್ಟು ಮೃತದೇಹ ಇದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಅವರು ಒತ್ತಾಯಿಸಿದರು.
‘ರಘುಪತಿ ಭಟ್ ಶೋಕಿಗಾಗಿ ಬಂದರೇ ಹೊರತು ಕಾಳಜಿಯಿಂದಲ್ಲ’
‘ಸುವರ್ಣ ತ್ರಿಭುಜ ಬೋಟು ಹುಡುಕಲು ಹೊರಟಾಗ ರಘುಪತಿ ಭಟ್ ಶಾಸಕರಾಗಿದ್ದರು. ಅವರು ನಮ್ಮ ಜೊತೆ ಮೀನುಗಾರರನ್ನು ಹುಡುಕಬೇಕೆಂಬ ಉದ್ದೇಶದಿಂದ ಬಂದಿರುವುದಲ್ಲ. ಅವರು ಶೋಕಿಗಾಗಿ ಬಂದಿರುವುದು ಅಷ್ಟೆ. ಅವರು ಮೊದಲು ಹಡಗಿನಲ್ಲಿ ಬರಲು ಹೆದರಿ ಹಿಂದೇಟು ಹಾಕಿದರು. ಮತ್ತೆ ನಾವೆಲ್ಲ ಹೇಳಿದ ನಂತರ ಬಂದರು. ಹೋದ ಬಳಿಕ ವಾಪಾಸ್ಸು ಬರಲು ಅವಕಾಶ ಇಲ್ಲದೆ ಅನಿವಾರ್ಯ ಕಾರಣದಿಂದ ಅವರು ಏಳು ದಿನ ನಮ್ಮೆಂದಿಗೆ ಇದ್ದರು. ವಾಪಾಸ್ಸು ಬಂದ ಬಳಿಕ ರಘುಪತಿ ಭಟ್, ನಾನು ಮೀನುಗಾರರನ್ನು ಹುಡುಕಲು ಏಳು ದಿನ ಸಮುದ್ರದಲ್ಲಿ ಇದ್ದೆ ಎಂದು ಸುಳ್ಳು ಮಾಹಿತಿ ನೀಡಿದ್ದರು’ ಎಂದು ಗಂಗಾಧರ ಸಾಲ್ಯಾನ್ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ರಘುಪತಿ ಭಟ್ ಏಳು ದಿನ ಸಮುದ್ರದಲ್ಲೇ ಇದ್ದರೆಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಅವರಿಗೆ ನೋವು ಮಾಡುವುದು ಬೇಡ ಎಂದು ನಾವು ಸುಮ್ಮನೆ ಆ ಬಗ್ಗೆ ಟೀಕೆ ಮಾಡಲು ಹೋಗಿಲ್ಲ. ಇವರು ಜನರಿಗೆ ಗಾಳಿ ಸುದ್ದಿಯೇ ಕೊಟ್ಟರು ಹೊರತು ಸತ್ಯ ವಿಷಯ ತಿಳಿಸಲಿಲ್ಲ. ಒಟ್ಟಾರೆ ಈ ದುರಂತವನ್ನು ರಾಜಕೀಯ ಕಡೆ ತೆಗೆದುಕೊಂಡು ಹೋದರು ಎಂದು ಅವರು ದೂರಿದರು.
ಮೀನುಗಾರರ ಕಿವಿಗೆ ಹೂವು ಇಡುವ ಪ್ರಯತ್ನ!
ಬೋಟು ದುರಂತದ ವಿರುದ್ಧ ಮೀನುಗಾರರು ನಡೆಸಿದ ಬೃಹತ್ ಹೋರಾಟ ವನ್ನು ಕೂಡ ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡರು. ಈ ಬಗ್ಗೆ ಕೇಂದ್ರ ಸಚಿವರಿಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಧೈರ್ಯ ನಮ್ಮ ರಾಜ್ಯ ಸರಕಾರ ಆಗಲೀ ಇಲ್ಲಿನ ಬಿಜೆಪಿ ರಾಜಕಾರಣಗಳಿಗೆ ಇರಲಿಲ್ಲ. ಹಾಗಾಗಿ ಈ ವಿಚಾರದಲ್ಲಿ ನಮಗೆ ನ್ಯಾಯ ದೊರೆತಿಲ್ಲ’ ಎಂದು ಗಂಗಾಧರ ಸಾಲ್ಯಾನ್ ಆರೋಪಿಸಿದ್ದಾರೆ.
‘ಇವರು ಹಿಂದೆ ಕೂಡ ಇದೇ ರೀತಿ ಮಾಡಿದ್ದು, ಮುಂದೆ ಕೂಡ ಮೀನುಗಾರರಿಗೆ ಏನೇ ಆದರೂ ಇವರು ಖಂಡಿತ ಸಹಾಯಕ್ಕೆ ಬರುವುದಿಲ್ಲ. ಮೀನುಗಾರರಿಗೆ ಕೇವಲ ಯೋಜನೆಗಳ ಆಶ್ವಾಸನೆ ಕೊಟ್ಟು ಕಿವಿ ಹೂವು ಇಡುವ ಕೆಲಸ ಮಾಡುತ್ತಿದ್ದಾರೆ. ಇವರು ಕರಾವಳಿಯ ಜನತೆಯನ್ನು ಹಿಂದುತ್ವ ಹಾಗೂ ಆಶ್ವಾಸನೆಯ ವಿಷಯದಲ್ಲಿ ಮಂಗ ಮಾಡುತ್ತಿದ್ದಾರೆ. ಮೀನುಗಾರರು ಇವರ ಕೈಗೊಂಬೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
‘ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ಪಾಲ್ ಸುವರ್ಣ, ಅಂದು ಲೋಕಸಭಾ ಚುನಾವಣೆ ಸಂದರ್ಭ ನಮ್ಮ ಊರಿಗೆ ಬಂದು ಮತ ಕೇಳಲು ಬಂದಿದ್ದರು. ಅಲ್ಲೇ ಹತ್ತಿರ 100ಮೀಟರ್ ಅಂತರದಲ್ಲಿ ಈ ದುರಂತದಲ್ಲಿ ಅಸುನೀಗಿದ ಇಬ್ಬರು ಮೀನುಗಾರರ ಮನೆ ಇತ್ತು. ಅಲ್ಲಿಗೆ ಬಂದು ಏನಾಯಿತು ಎಂದು ಕೇಳಲಿಲ್ಲ. ನ್ಯಾಯದ ಭರವಸೆಗಳನ್ನು ಕೂಡ ಕೊಟ್ಟಿಲ್ಲ. ಇನ್ನು ಮುಂದೆ ಕರಾವಳಿಯ ಮೀನುಗಾರರು ಇದೇ ರೀತಿ ಸತ್ತರೇ ಇವರಿಂದ ನಮಗೆ ನ್ಯಾಯ ಸಿಗಬಹುದೆ?’
-ಗಂಗಾಧರ ಸಾಲ್ಯಾನ್, ಮೀನುಗಾರ